ಶನಿವಾರ, ಫೆಬ್ರವರಿ 28, 2015

ಉತ್ತರಿಸು

ಬಾ ಹಕ್ಕಿ ಹತ್ತಿರಕೆ ಹಾರು ಬಾ ಎತ್ತರಕೆ
ಬತ್ತದಾ ಬಾನ್ದನಿಯ ಬಿತ್ತರಿಸು ಬಾ
ನೀನುತ್ತಿದಾ ಬಾನಿನಲಿ ಕತ್ತಲೆಯು ಎಲ್ಲಿ?
ನನ್ನೆಲ್ಲ ಪ್ರಶ್ನೆಗಳಿಗುತ್ತರಿಸು ಬಾ

ಬೆಳಗಾಗುವಾ ವೇಳೆ ತಿಳಿಯುವಾ ಬಗೆ ಹೇಗೆ?
ಕಾಳ್ಗಳಿರುವಾ ಸುಳಿವನಿತ್ತವರು ಯಾರು?
ನೀಲದಾಗಸದಲ್ಲಿ ಮೇಲೇರಿ ಕೆಳಗಿಳಿವ
ಕಾಲತಾಳಗಳರಿವನೆರೆದವರು ಯಾರು?

ಹಣ್ಣುಗಳ ತಿಂದುಂಡು ಬೀಜಗಳನುಗುಳುಗುಳಿ
ಬನವ ನೀ ಬೆಳೆಸೆಂದು ಹೇಳಿದವರಾರು?
ಗೋವುಗಳ ಮೈಕುಕ್ಕಿ ಉಣುಗುಗಳ ಕಿತ್ತೆಸೆವ
ಸಹಕಾರದಾ ಸಾರವರುಹಿದವÀರಾರು?

ಕವಿಯೆದೆಯ ಗರ್ಭದಲಿ ಪ್ರತಿಯುಲಿಗೆ ಕಾವಿರಿಸಿ
ಕವಿತೆಗಳ ಸಂತತಿಯ ಬೆಳೆಸುತಿಹೆ ನೀನು
ಭಾವಪಕ್ಷಿಯ ರೆಕ್ಕೆ ಬಲಿವಾಗ ನಲಿನಲಿದು
ಬುವಿಯಗಲ ಹಗಲೆರೆವ ರವಿಯು ನಾನು.

ಡಿ.ನಂಜುಂಡ
28/02/2015


ಮಂಗಳವಾರ, ಫೆಬ್ರವರಿ 17, 2015

ಪದಸಂಚಲನ

ದುರ್ಗಮ ಮನವನದಂತರತಮಶಿವ-
ಪದಸಂಚಲನದ ದನಿ ಕೇಳಿ
ಭಾವೋತ್ಪಲಗಳ ಕಾವ್ಯೋದ್ಯಾನದಿ
ವಾಗರ್ಥಗಳಾ ರತಿಕೇಲಿ

ಮತಿಗಿರಿಜಾಸಹನಾಟ್ಯದ ವೇಳೆ
ಚಿತ್ತಾಂತರ್ಯದ ಶಿಲೆಗಳ ಮೇಲೆ
ಸತ್ಯಾತ್ಮನ ಸುಖಶಾಂತಿಯ ಮೌನಕೆ
ಓಂತರುಪಲ್ಲವ ಶರ ಸೋಕೆ

ಜಿಹ್ವಾಮೂಲದಿ ಘಂಟಾಧ್ವಾನ
ಅಕ್ಷರಬಂಧಕದಾಹ್ವಾನ
ಸ್ವರವ್ಯಂಜನದಾಲಿಂಗನದಲಿ
ಕವಿತಾ ಮೃದುಪದಸಂಚಲನ

ಡಿ.ನಂಜುಂಡ
17/01/2015


ಮಂಗಳವಾರ, ಜನವರಿ 27, 2015

ಕಾಫಿ

ಬಿಸಿಬಿಸಿ ಕಾಫಿಯ ಹಬೆಯನು ಸ್ಪರ್ಶಿಸೆ
ತಲೆಬಿಸಿಯಾ ಕಾವಳಿಯುವುದು
ಮೇಲಧಿಕಾರಿಯ ದರ್ಪದ ಬಿರುಮೊಗ
ಕ್ಷಣಮಾತ್ರದಿ ಮರೆಯಾಗುವುದು

ಒತ್ತಡಗಳು ಬದಿ ಸರಿಯುವುವು
ಬತ್ತಿದ ಕಂಗಳು ಅರಳುವುವು
ತಲೆಗೂದಲುಗಳು ಒಗ್ಗೂಡುವುವು
ಇಂದ್ರಿಯಗಳು ಸಭೆ ಸೇರುವುವು

ಸಿಹಿಗೂಡಿದ ಕಹಿ ಕಾಫಿಯ ಹೀರುತ
ಬುರುಬುರಿಗಳ ತಾ ಕಡಿಯುತಿರೆ
ಸರಸರ ಪದಗಳು ಸರತಿಯ ಸಾಲಲಿ
ನಾಲಗೆ ಮೇಲ್ ಕುಣಿಕುಣಿಯುತಿರೆ

ನಾಳೆಯ ಚಿಂತೆಗಳೆಲ್ಲವು ಕೂಡಲೆ
ನೇಣಿನ ಕುಣಿಕೆಗೆ ಬೀಳುವುವು
ಸುಮ್ಮನೆ ಮನಸನು ಸುಟ್ಟಾ ತಪ್ಪಿಗೆ
ಆತ್ಮಾರ್ಪಣೆಯಲಿ ಕೊನೆಯಾಗುವುವು

ಕಾರ್ಗತ್ತಲ ತೆರ ಕೆಳಗಿಳಿದಿಹ ಗಸಿ
ಲೋಟದ ಬುಡದಲಿ ಒಗ್ಗೂಡೆ
ಹರಿ ಕುಳಿತಿಹ ಹೃತ್ಪದ್ಮದ ದಳಗಳು
ಕಾಫಿಯ ಪರಿಮಳದೊಡಗೂಡೆ

ಇಂದಿನ ಕೆಲಸವ ಇಂದೇ ಮಾಡುವೆ
ಎಂಬಾ ಶಪಥವು ಚಿಮ್ಮುವುದು
ಹೆಂಡತಿ ಮಕ್ಕಳು ಮಿತ್ರರು ಮುದುಕರು
ಎಲ್ಲರ ಮೇಲ್ ದಯೆಮೂಡುವುದು

ದೂರದ ದೃಷ್ಟಿಯು ಹೊಳೆಯುವುದು
ಮಾರ್ಗವು ಗೋಚರವಾಗುವುದು
ತುಸು ಸುಲಭದ ಹೊಸ ಪಥದಲಿ ಚಲಿಸಲು
ನಿರ್ಮಲ ಮನಸಣಿಯಾಗುವುದು
ಶುಭಮಂಗಳಕರವಾಗುವುದು.

ಡಿ.ನಂಜುಂಡ
27/01/2015




ಧ್ವನಿ

ಯಾವುದೋ ಕಲ್ಪನೆಗೆ ಕವಿಮನವು ಸಂಚಲಿಸಿ
ಉಲ್ಲಾಸಭಾವದಲಿ ಉಯ್ಯಾಲೆಯಾಡಿ
ವ್ಯೋಮಾದಿ ಮಧ್ಯಾಂತರಾಹಿತ್ಯ ಪರಿಪೂರ್ಣ-
ಪದಬಂಧಸಾಹಿತ್ಯದಾನಂದವೂಡಿ

ಅದ್ವೈತ ವಾಗರ್ಥಬೀಜಗಳನುಪಚರಿಸಿ
ಚಿತ್ತಭೂಮಿಯನಗೆದು ಅಲ್ಲಲ್ಲಿ ಬಿತ್ತಿ
ಸತ್ಸಂಗ ಸಾವಯವ ಸಾರಗಳನೈತಂದು
ನೇತ್ರಾದಿ ಕರಣಗಳ ಸೊಲ್ಲುಗಳನೊತ್ತಿ

ಅಸ್ತಿ ನಾಸ್ತಿಗಳೆಂಬ ಕಳೆಗಳೆಲ್ಲವ ಕಿತ್ತು
ಸದಸದ್ವಿವೇಕವಿಜ್ಞಾನತಂತ್ರದಲಿ
ಆಂತರ್ಯದಾಕಾಶವಿಸ್ತಾರಚೈತನ್ಯ-
ಕಣಸ್ಪರ್ಶದಾ ಝಣದ ಕುಣಿದಾಟದಲ್ಲಿ

ಕಾಮನಾ ಬಿಲ್ಲಂತೆ ವರ್ಣವೆಲ್ಲವು ಬಾಗಿ
ಸೃಷ್ಟಿಸೌಂದರ್ಯಕ್ಕೆ ತಾಗಿ ಧ್ವನಿಯಾಗಿ
ರವಿಯ ಸಾರಥಿಯಾಗಿ ಅರುಣ ತಾ ಬರುವಾಗ
ಬಾನಾಡಿಗಳ ಕೊರಳ ಸ್ವರಮೇಳವಾಗಿ
ತಾನನವೇ ತಾನಾಗಿ ಬಂತು ಹಾಡಾಗಿ.

ಡಿ.ನಂಜುಂಡ
27/01/2015