ಬುಧವಾರ, ಫೆಬ್ರವರಿ 12, 2014

ಒಕ್ಕಲಾಟ



ಚಿಕ್ಕವರ ಎದೆಯೊಳಗೆ ಹೊಕ್ಕಿರುವ ಪದವೊಂದು
ಉಕ್ಕಿರುವ ನಗೆಯಲ್ಲಿ ಹಾಡಾಗಬೇಕು
ಅಕ್ಕರೆಯ ಮಾತುಗಳು ಮಾಧುರ್ಯದರಳಾಗಿ
ಪಕ್ಕವಾದ್ಯದ ಲಯಕೆ ಪುಟಿಯುತಿರಬೇಕು

ಹಕ್ಕಿಯುದರದಿ ಬೆಂದ ಹಣ್ಣಿನಾ ಬೀಜವದು
ಹಿಕ್ಕೆಯಲಿ ನೆಲಕುದುರಿ ಮರವಾಗಬೇಕು
ಅಕ್ಕಿಸಿಪ್ಪೆಯು ಬಿಟ್ಟ ಕಲಗಚ್ಚ ತಾ ಕುಡಿದು
ಚೊಕ್ಕ ಹಾಲನು ಹಸುವು ಸುರಿಸುತಿರಬೇಕು

ಒಕ್ಕಲಿಗ ತಾನುತ್ತು ಬೆಳೆದ ಧಾನ್ಯವನೊಕ್ಕಿ
ತಕ್ಕ ರೊಕ್ಕವ ಗಳಿಸಿ ಸುಖಿಯಾಗಬೇಕು
ಕೊಕ್ಕಿನಲಿ ಕಾಳುಗಳನಿಕ್ಕುತಲಿ ಮರಿಗಳಿಗೆ
ಮಿಕ್ಕುದನು ತಾನುಣುವ ಖಗವಾಗಬೇಕು

ಸಿಕ್ಕಸಿಕ್ಕೆಡೆಗಳಲಿ ಬೆಳಕ ಬಾಣವನೆಸುದು
ರಕ್ಕಸರನಟ್ಟಿಸುವ ರವಿಯಾಗಬೇಕು
ಉಕ್ಕುತಿಹ ಭಾವದಲಿ ಚಂದ್ರಬಿಂಬವು ಹೊಕ್ಕು
ಸೊಕ್ಕುತಲಿ ಹುಣ್ಣಿಮೆಯ ಸುಧೆಯಾಗಬೇಕು.

ಡಿ.ನಂಜುಂಡ
12/02/2014

ಮಂಗಳವಾರ, ಫೆಬ್ರವರಿ 11, 2014

ಬಂಧವಿಲ್ಲದ ಪ್ರೇಮ



ಬಂಧವಿಲ್ಲದ ಒಲವು ಮೌನಘನವಾಗಿರಲು
ಮಾತೇಕೆ ಬೇಕೆಮಗೆ 'ಪ್ರೇಮಿಸುವೆ' ಎಂದು
ಮತಿಯ ಚಾತುರ್ಯಗಳ ಬಯಲಿನಲಿ ಕಿತ್ತೊಗೆದು
ಜಗದೊಲವನÀರಿಯೋಣ ಸ್ಥಿರವಾಗಿ ನಿಂದು

ಮಣ್ಣ ಸಾರವ ಸೆಳೆದು ಮರದೆಲೆಗೆ ಉಣಿಸುತಿಹ
ಬೇರು ತಾ ಹೇಳದದು 'ಪ್ರೀತಿಸುವೆ' ಎಂದು
ಹಣ್ಣೆಲೆಯು ನೆಲಕುದುರಿ ಬೇರ ತಳಕಿಳಿವಾಗ
ಮಮತೆಯಲಿ ಕೇಳುವುದೆ 'ನೀನಾರ ಬಂಧು?'

ಮೋಡಗಳು ನೀರ್ಗರೆದು ಶಾಂತವಾಗುವ ಹಾಗೆ
ಒಪ್ಪಿಸುತ ಪ್ರೇಮವನು ಹಗುರಾಗೆ ನಾವು
ಪ್ರಕೃತಿಯಲಿ ಪಸರಿಸಿಹ ತತ್ತ್ವವದು ಹರಿವಾಗಿ
ನಮ್ಮೊಳಗೆ ನಿಲ್ಲುವುದು ನಿಶ್ಚಲದ ಅರಿವು

ನಮ್ಮೊಲವ ಧಾರೆಯದು ಪ್ರಕೃತಿಯಲಿ ಒಂದಾಗಿ
ಲತೆಯಂತೆ ಚಿಗುರುತಲಿ ಫಲದೊಳಗೆ ಬರಲಿ
ಮುಗುಳೊಂದು ಕಾಯ್ಕಟ್ಟಿ ತೊಟ್ಟು ಕಳಚುವ ಹಾಗೆ
ಮಾತೆಲ್ಲ ಮುಗಿದಂತೆ ಶಿವವಾಗಿ ನಿಲಲಿ

ಜಾತಿಮತಪಂಥಗಳ ಎಲ್ಲೆಯನು ಮೀರುತಲಿ 
ಸೃಷ್ಟಿಸಹಜದ ಪ್ರೇಮವವತರಿಸಿ ಬರಲಿ
ಚಿತ್ತಾಭಿಷೇಕದಲಿ ನಿತ್ಯವದನರ್ಚಿಸುತ
ಸತ್ಯಸುಂದರಜಗಕೆ ಮನವನÀರ್ಪಿಸಲಿ.

ಡಿ.ನಂಜುಂಡ
11/02/2014



ಶನಿವಾರ, ಫೆಬ್ರವರಿ 8, 2014

ಬಾರೋ ವಸಂತ



ಸುಮಸಮಸುಂದರ ಪದಬಂಧದ ಕಲಕಂಠದ ವನಘಂಟಾಧ್ವಾನ
ಚೈತ್ರೋದ್ಯಾನದಿ ಪ್ರೇಮೋತ್ಸವರತ ವಸಂತದೇವಗಿದಾಹ್ವಾನ

ಬಾರೋ ಲತೆಗಳ ಮಂಟಪ ಮಧ್ಯಕೆ ರಸನೈವೇದ್ಯದ ಸ್ವಾದನೆಗೆ
ಪೂರ್ವದಿಗಂತದ ನವಾರುಣೋದಯ ಕಿರಣೋಪಮ ಮನವಿಕಸನಕೆ

ಗಿರಿಕಟಿಯಟವಿಯ ನದೀವಿಹಾರಕೆ ಸ್ವಾದೂದಕಸಂಪ್ರಾಶನಕೆ
ಜಲತಾಡನದಾ ಕೇಲಿಯ ತುಷ್ಟಿಗೆ ಭಾವೋಲ್ಲಾಸದ ಕರ್ಷಣೆಗೆ

ಬಾ ತರುಶಾಖೆಗೆ ಬಾ ತರುಮೂಲಕೆ ನಾನಾವಿಧಫಲಭೋಜನಕೆ
ಪಂಚವಟೀತಟ ಪರ್ಣಕುಟೀರಕೆ ಶೃಂಗಾರರ್ಷಿಗಳಾಶ್ರಮಕೆ

ನವತಾರುಣ್ಯದ ಹೃದಯಸರೋಜಕೆ ಬಾರೋ ಮಧುಸಂಪೋಷಣೆಗೆ
ಜೀವನಯಾತ್ರಾಪಥಸಂಕ್ರಮಣಕೆ ಆನಂದಾಮೃತವಿತರಣೆಗೆ.

ಡಿ.ನಂಜುಂಡ
09/02/2014