ಶನಿವಾರ, ಜೂನ್ 3, 2017

ಭವಬಂಧಿಯೇಕೆ?

ಭಾವವೇ! ನೀನೇಕೆ ಭವಬಂಧಿಯಾದೆ?
ಕಾಮಾದಿವೈರಿಗಳ ಸಂಬಂಧಿಯಾದೆ

ಜಗದೊಲವು ಸಮರಸದಲೆಲ್ಲಲ್ಲೂ ಪಸರಿಸಿದೆ
ಇದು ಮೇಲು ಅದು ಕೀಳು ಎಂಬುದಿಲ್ಲ
ನಿತ್ಯಮುಕ್ತಾನುಭವದಾನಂದಸೃಷ್ಟಿಯಲಿ
ಸುಖದುಃಖದೇರಿಳಿತದಲೆಗಳಿಲ್ಲ

ಮರ ಚಿಗುರಿ ಕಾಯ್ಕಚ್ಚಿ Àಕ್ವವಾದೊಡೆ ಕಳಚಿ
ನೆಲಕುದುರಿ ಮೊಳೆತು ಮರವಾಗುವಾಗ
ಪ್ರಕೃತಿಯಾ ತಾನನದಿ ತನ್ನತನವನು ಬೆಸೆದು
ಬಾಳುವಾ ಕಲೆಯು ಕಣ್ತುಂಬುವಾಗ

ನೋಡಿ ತಾ ಕಲಿಯದೆಯೆ ಬಾನ್ದನಿಯನರಿಯದೆಯೆ
ತಾಳ ತಪ್ಪುತ ಕುಣಿಯಲಾಸೆಯೇಕೆ?
ಜಗದೇಕ ಮಾಧುರ್ಯವರ್ಣಮೇಳಕೆ ಕುಣಿದು
ಬಂಧಿಯಾಗದೆ ಬಾಗಲಿಲ್ಲವೇಕೆ?
ಮೌನದೊಳ ಮಾತಾಗಬಾರದೇಕೆ?

ಡಿ.ನಂಜುಂಡ

03/06/2017