ಬುಧವಾರ, ನವೆಂಬರ್ 22, 2017

ಶನಿ



ಕರ್ಮಫಲವೀವ ಶನಿದೇವನೇ ಪರತತ್ತ್ವ
ಧರ್ಮಮಾರ್ಗಗಳನ್ನು ತೆರೆಯುವನು ನಿತ್ಯ
ಮಂದಗತಿಯಲಿ ಮತಿಯ ಮಥಿಸಿ ಮೋಹವನಳಿಸಿ
ಅಂತರಂಗವ ಬೆಳಗಿ ತೋರುವನು ಸತ್ಯ

ಅದು ಬೇಕು ಇದು ಬೇಕು ಎಂದು ಮನವೋಡುತಿರೆ
ದುಃಖಗಳ ತಡೆಗೋಡೆಯೊಂದ ತಂದೊಡ್ಡಿ
ವಿಷಯೋಪಭೋಗಗಳಲಂಟು ಬರದಾ ಹಾಗೆ
ಪಾಪಗಳ ಲೆಕ್ಕಕ್ಕೆ ನೀಡುತಲಿ ಬಡ್ಡಿ

ಈ ಜಗವೆ ನನಗಾಗಿ ನಾನೊಬ್ಬನಿದರೊಡೆಯ
ಎಂಬಂತೆ ಮಾನವನು ಬೀಗುತಿರಲಿಹದಿ
ಭಾವಾಗ್ನಿಜ್ವಾಲೆಯಲಿ ಸ್ವಾರ್ಥಬೀಜಗಳಿಟ್ಟು
ಸುಟ್ಟು ಕರಕಲುಗೊಳಿಸಿ ಮುಗುಳುನಗುಮೊಗದಿ

ಅಲ್ಪತೃಪ್ತನಿಗೆ ಅತಿಶಯದ ಸುಖಗಳನಿತ್ತು
ಅತಿಲೋಭಿಗಾತಂಕದುದ್ವೇಗವಿತ್ತು
ಜ್ಞಾನವೈರಾಗ್ಯಗಳನೀಯುತಲಿ ಸಾಗುವನು
ಸಮತೂಕದಲಿ ಸಚ್ಚಿದಾನಂದವುತ್ತು

ಡಿ.ನಂಜುಂಡ
22/11/2017