ಶುಕ್ರವಾರ, ಅಕ್ಟೋಬರ್ 28, 2016

ಹಬ್ಬ

ನೀರ್ತುಂಬುವುದು ಹಬ್ಬ ಎಣ್ಣೆ ಸ್ನಾನವು ಹಬ್ಬ
ಗೋವುಗಳ ಪೂಜಿಸಲು ಇಹುದೊಂದು ಹಬ್ಬ
ಹೊಸ ಹರುಷದಲ್ಲಿ ಹೊಸತುಡೆಯನುಡುವುದು ಹಬ್ಬ
ಸಾಲು ಸಾಲಲಿ ಹಣತೆ ಹಚ್ಚುವುದು ಹಬ್ಬ

ಆಕಾಶ ಬುಟ್ಟಿಗಳ ಸೂರ ತುದಿಯಲಿ ಸಿಗಿಸಿ
ಕಣ್ ದಣಿಯೆ ನೋಡುವುದು ನಮಗೆ ಹಬ್ಬ
ಅಲ್ಲಲ್ಲಿ ಕೋಲ್ದೀಪಗಳ ಹಚ್ಚುವುದು ಹಬ್ಬ
ಹಾಡುವುದು ಕುಣಿಯುವುದು ಎಲ್ಲವೂ ಹಬ್ಬ

ಮೌನವಿರುವುದು ಹಬ್ಬ ಧ್ಯಾನಗೈವುದು ಹಬ್ಬ
ಬಾಯ್ತುಂಬ ಮಾತಾಡೆ ಹಬ್ಬವೋ ಹಬ್ಬ
ಎಲ್ಲ ಕಜ್ಜಗಳೆಮಗೆ ಕಜ್ಜಾಯದಂತಾಗೆ
ಕ್ಷಣ ಕ್ಷಣವು ಹೊಸೆಯುತಿದೆ ಹೊಸತೊಂದು ಹಬ್ಬ

ಡಿ.ನಂಜುಂಡ
28/10/2016
28/10/2016

ಭಾನುವಾರ, ಅಕ್ಟೋಬರ್ 16, 2016

ಭೂಮಾತೆ

ಗಂಧವತಿ ಭೂಮಾತೆ ಬಂಧಮೋಕ್ಷವಿದಾತೆ
ಒಂದು ಕೊಡೆ ಹಲವೀವ ಆನಂದಪಾತ್ರೆ
ಎಂದೆಂದಿಗೂ ಸೆರಗ ಹರಹಿನಲಿ ನೆರಳಿತ್ತು
ಕಂದರನು ಪೊರೆಯುತಿಹ ಅನ್ನದಾತೆ

ಹುಣ್ಣಿಮೆಯ ಹೊಂಗಿರಣವೂಡುತಿರೆ ಮಣ್ಣಿನಲಿ
ಕಣ್ಣೆವೆಯನರೆ ತೆರೆದು ಔಷಧವನರೆವೆ
ಬಣ್ಣಗಳಲೂಡಿಸುತ ಮರಬಳ್ಳಿಗಳಿಗೆಲ್ಲ
ತನ್ನೊಲವಿನೊಳಲೆಯೊಳು ತಂಪನೆರೆವೆ

ಹಸಿರ ಕುಡಿಯುಸಿರಿನಲಿ ಬಸಿರೊಡೆದ ಕಾಳ್ಗಳಲಿ
ಹೊಸತನÀ ಕುಡಿಯೊಡೆದು ಕೆಂಪಗಾಗೆ
ನಸುನಗುವು ಟಿಸಿಲೊಡೆದು ತೊದಲುಲಿಯ ಮಧುವಾಗಿ
ಹಸುಗೂಸನಾಡಿಸುವ ಲಾಲಿಯಾಗೆ

ಬಾನಗಲ ಮೈದಳೆದ ನಾನು ನಾನೆಂಬುದದು
ಕಾನ ಮಣ್ಣೊಳಗಿಳಿದು ಲೀನವಾಗೆ
ತಾನನದ ದನಿಯೊಂದು ಮರು ಜನ್ಮದಳುವಾಗಿ
ತಾನುಳಿಯೆ ನೀ ಕಾಯೆ ತಾಯಿಯಾಗೆ

ಡಿ.ನಂಜುಂಡ
16/10/2016

ಶನಿವಾರ, ಅಕ್ಟೋಬರ್ 15, 2016

ವಾಗರ್ಥಪಕ್ಷಿಗಳು

ವಾಗರ್ಥಶೃಂಗಾರಕೇಲಿಯಾ ಸಮಯದಲಿ
ಅರ್ಥವನು ಕೊಲೆಗೈದ ಪಾಪಿ ನೀನೋ?
ದೇಹದೊಳಗಿರುವಾತ್ಮ ನಿತ್ಯವಾಗಿರುವಂತೆ
ಅರ್ಥಕ್ಕೆ ಸಾವಿಲ್ಲ -ಅಲ್ಲವೇನೋ?

ತನುಮನವು ಮೈಮರೆತು ನಾಮರೂಪವ ಭಜಿಸೆ
ಅರಿವು ಗೋಚರಿಪುದೇ? ಅರಿತು ಹೇಳು
ದೇಹಭಾವವನಳಿಸಿ ಮನವ ಬಾನೊಳಗಿಳಿಸಿ
ಆತ್ಮಾರ್ಥಭಾವಗೀತೆಯೊಲು ಕೇಳು

ವಾಕ್ಸೀತೆಯಪಹರಿಸೆ ಅರ್ಥರಾಮನು ಬಿಡದೆ
ಹತ್ತು ತಲೆಗಳ ಕಡಿದು ಮತ್ತೆ ಪಡೆಯೆ
ಪ್ರಕೃತಿಪುರುಷರ ಹಾಗೆ ಕವಿಋಷಿಯ ಭಾವದೊಳು
ರಾಮಸೀತೆಯ ಹಾಗೆ ಜೀವದಳೆಯೆ
ವಾಗರ್ಥದಂತಿಹುದು ಕ್ರೌಂಚಮಿಥುನ
ವ್ಯಥೆಯೆ ಕತೆಯಾದಂತೆ -ರಾಮಾಯಣ

ಡಿ.ನಂಜುಂಡ
15/10/2016

ವಾಗರ್ಥಪಕ್ಷಿಗಳು

ವಾಗರ್ಥಶೃಂಗಾರಕೇಲಿಯಾ ಸಮಯದಲಿ
ಅರ್ಥವನು ಕೊಲೆಗೈದ ಪಾಪಿ ನೀನೋ?
ದೇಹದೊಳಗಿರುವಾತ್ಮ ನಿತ್ಯವಾಗಿರುವಂತೆ
ಅರ್ಥಕ್ಕೆ ಸಾವಿಲ್ಲ -ಅಲ್ಲವೇನೋ?

ತನುಮನವು ಮೈಮರೆತು ನಾಮರೂಪವ ಭಜಿಸೆ
ಅರಿವು ಗೋಚರಿಪುದೇ ಅರಿತು ಹೇಳು?
ದೇಹಭಾವವನಳಿಸಿ ಮನವ ಬಾನೊಳಗಿಳಿಸಿ
ಆತ್ಮಾರ್ಥಭಾವಗೀತೆಯೊಲು ಕೇಳು

ವಾಕ್ಸೀತೆಯಪಹರಿಸೆ ಅರ್ಥರಾಮನು ಬಿಡದೆ
ಹತ್ತು ತಲೆಗಳ ಕಡಿದು ಮತ್ತೆ ಪಡೆಯೆ
ಪ್ರಕೃತಿಪುರುಷರ ಹಾಗೆ ಕವಿಋಷಿಯ ಭಾವದೊಳು
ರಾಮಸೀತೆಯ ಹಾಗೆ ಜೀವದಳೆಯೆ
ವಾಗರ್ಥದಂತಿಹುದು ಕ್ರೌಂಚಮಿಥುನ
ವ್ಯಥೆಯೆ ಕತೆಯಾದಂತೆ -ರಾಮಾಯಣ

ಡಿ.ನಂಜುಂಡ
15/10/2016

ಶನಿವಾರ, ಅಕ್ಟೋಬರ್ 1, 2016

ಬಾ ದುರ್ಗೇ

ದುಷ್ಟವಿನಾಶಿನಿ ದುರ್ಗತಿಹಾರಿಣಿ
ದುರ್ಜನಭಂಜಿನಿ ಹೇ ದುರ್ಗೇ
ದುರಿತವಿದೂರಿಣಿ ದುಃಖನಿವಾರಿಣಿ
ದುರ್ವೃತ್ತಶಮನಿ ನವದುರ್ಗೇ

ಅಂತಃಕರಣದೊಳಾವಿರ್ಭವಿಸಿ
ಅಷ್ಟದಲೋಪರಿ ನೀ ನೆಲೆಸಿ
ದುರಹಂಕಾರವ ದೂರೀಕರಿಸಲು
ಕಂಠವಿಶುದ್ಧದಿ ಹೂಂಕರಿಸಿ

ವ್ಯೋಮಾಂತರ್ಗತದೋಂಕಾರವನು
ನಾಭೀಮೂಲಕೆ ತಂದಿರಿಸಿ
ನಾದನಿನಾದವಿನೋದಾಮೋದವ
ಸುನಿಧಾನದೊಳಾಹತಗೊಳಿಸಿ

ಪ್ರಾಣದ ಕಣಕಣವನು ಸಂಕರ್ಷಿಸಿ
ಧ್ಯಾನಧ್ಯೇಯಕೆ ಧಾರಣೆಗೆ
ಮತಿಸಂಚಾರದ ಪಥದರ್ಶನಕೆ
ನಿತ್ಯಮಕ್ತತೆಯ ಅನುಭವಕೆ
ಬಾ ಮಮ ಜೀವನ ಸದ್ಗತಿಗೆ

ಡಿ.ನಂಜುಂಡ

01/10/2016

?

ಕೆಳಕುದುರಿ ಮಣ್ಣಿನೊಳು ಬೆರೆತ ಎಲೆಗೊಳಕುಗಳ
ಎಳೆದು ಮತ್ತದನೆ ಫಲವೀಯುವಾ ನಾವು
ಅಳಿದು ಪಳೆಯುಳಿಕೆಯೊಲು ನೆಲಕೆ ಸಾರವನಿತ್ತು
ಬೆಳೆಯ ಕಾಳ್ಗಳಿಗೇರಿ ಕೆಳಗೆ ಬಾಗುವೆವು
ಸಾವಯವ ಸಾರವಿರೆ ಗೋವ ವರದಾನವಿರೆ
ಭಾವರಂಜಕವೀವ ಬಾನು ದನಿಯನೆರೆ
ಯಾವುದೇ ಅನ್ಯರಸಗೊಬ್ಬರಗಳೇತಕ್ಕೆ
ನಾವು ಸಹಕಾರಗಳನೆಲ್ಲೆಡೆಯು ಬೀರೆ
ಎಲೆ ಮನುಜ ನೀನಾಸೆಗಡಿಯಾಳಿನಂತಾಗಿ
ಎಲೆಯ ನಿಜಬೆಲೆಯನೂ ತಿಳಿಯದಿಹೆಯೇಕೆ?
ಕಾಲದಾ ಸಹಜ ಗತಿಯಲ್ಲಿ ಮಾಗುವ ಮುನ್ನ
ಕೊಲೆಗಡುಕನೊಲು ಹಲವು ವಿಷ ಸುರಿವೆಯೇಕೆ?
ಕಾಮಾದಿ ಕೀಟಗಳು ಕೊರೆಯುತಿರಲೊಳಗೊಳಗೆ
ನೀ ಮೊದಲು ಅವುಗಳಿಗೆ ಬೆಂಕಿಯನು ಹಾಕು
ವ್ಯಾಮೋಹರೋಗಕ್ಕೆ ಅದರ ಬೂದಿಯೆ ಸಾಕು
ಭೂಮಾತೆಯೊಲಿಯಲಿಕೆ ಸಾಕುರಿವ ಬೆಳಕು
ಇಂತು ನಿಮ್ಮ ಮರಗಳು
30/09/2016
(ಮಿತ್ರರೊಬ್ಬರ ಕೋರಿಕೆಯ ಮೇರೆಗೆ ಬರೆದದ್ದು)