ಶನಿವಾರ, ಅಕ್ಟೋಬರ್ 24, 2015

ನಾಳೆಗೇನು ತಿಂಡಿ?

ಹೇಳು ನಲ್ಲ! ನಾಳೆ ತಿನ್ನ-
ಲೇನು ತಿಂಡಿ ಮಾಡುವೆ?
ತವರಿನಲ್ಲಿ ಕುಳಿತ ನನಗೆ
ನೀನು ನೆನಪಾಗುವೆ

ಒಂದು ಲೋಟ ಕೆಂಪಕ್ಕಿಯನು
ಮೆಂತ್ಯದೊಡನೆ ನೆನೆಸಲೇ?
ಹಾಸಿಗೆಯಿಂದೆದ್ದು ರುಬ್ಬಿ
ದೋಸೆಯೆರೆದು ತಿನ್ನಲೇ?

ಏಳುವಾಗ ಕರೆಂಟಿಲ್ಲ-
ದಿದ್ದರೇನು ಮಾಡಲೇ?
ತಂಗಳನ್ನ ಕೂಡಿಸಿಟ್ಟು
ಚಿತ್ರಾನ್ನವನೂಡಲೇ?

ಇಲ್ಲ, ಇಲ್ಲ, ಸಾಧ್ಯವಿಲ್ಲ
ಹಸಿಮೆಣಸುಗಳಿಲ್ಲದೆ
ಫೋನಿನಲ್ಲಿ ನೀನೊಮ್ಮೆ…
ನೆನಪು ಮಾಡಬಾರದೆ?

ಅಷ್ಟಮಿಯಲಿ ತಂದಿಟ್ಟ
ಅವಲಕ್ಕಿಯ ತಿನ್ನಲೇ?
ಮುಗ್ಗಿದುದಕೆ ಮೊಸರನೆರೆದು
ಹೇಗೆ ತಿಂದು ಮುಕ್ಕಲೇ?

ಹೋಟೆಲ್ಲಿನ ತಿಂಡಿ ತಿಂದು
ಕಾಯಕವನು ಮುಗಿಸಲೇ?
ಉದರವಾಯುವುಬ್ಬರಿಸೆ
ತೇಗಿ ತೇಗಿ ತಗ್ಗಲೇ?

ಬೇಡ ಬೇಡಕಾಡ ಬೇಡ
ನಂಜುಂಡನ ನೆನೆಯುವೆ
ಮತ್ತೆ ಮತ್ತೆ ಗಂಜಿಯುಂಡು
ಇಹವನ್ನೇ ಮರೆಯುವೆ.

ಡಿ.ನಂಜುಂಡ
24/10/2015


ಶುಕ್ರವಾರ, ಅಕ್ಟೋಬರ್ 23, 2015

ಗಂಜಿ

ಎಲೆ! ಗಂಜಿಯನುಂಡವನೆ! ನಂಜುಂಡನೆ!
ಭಲೇ! ಗಂಜಿಯನುಂಡವನೇ!

ಬೆವರಿಳಿಸಿ ತಂದಂಥ ಕೆಂಪಕ್ಕಿ ಗಂಜಿ
ಭವತಾಪದುರಿಯಲ್ಲಿ ಬೆಂದಿರುವ ಗಂಜಿ
ಶವಪೂಜೆಗಣಿಯಾದ ನೆನೆಯಕ್ಕಿ ಗಂಜಿ
ಶಿವ! ನೀನು ಮೆಚ್ಚುವುದದಾವ ಗಂಜಿ?

ಉದರವೈರಾಗ್ಯದಲಿ ಬೇಯಿಸಿಹ ಗಂಜಿ
ಮದÀಮೋಹಕಾಮಗಳನದುಮಿಟ್ಟ ಗಂಜಿ
ಮುದವಿತ್ತು ತೊದಲುಲಿಯ ನುಡಿಸಿದಾ ಗಂಜಿ
ಹದವರಿತು ಬೇಯಿಸಿಹ ಬಾಳ ಗಂಜಿ

ಶಿವೆ ತಾನು ತವರಿನಲಿ ತಳವೂರಿ ಕುಳಿತಿರಲು
ಶಿವ! ನೀನು ಧ್ಯಾನದಲಿ ಬೇಯಿಸಿಹ ಗಂಜಿ
ಭವಭಾಗ್ಯದಕ್ಕಿಯದು ಬಡವರಕ್ಷತೆಯಾಗೆ
ಭವ! ನೀನು ಚಪ್ಪರಿಸಿ ಸವಿದಂಥ ಗಂಜಿ

ಡಿ.ನಂಜುಂಡ

23/10/2015

ಬುಧವಾರ, ಅಕ್ಟೋಬರ್ 21, 2015

ಮಲಗು

ಬಾಳಗಡಿಕಲ್ಲಿನಡಿ ಜಾಗವೆಷ್ಟಿದೆಯೋ?
ಆಸೆ ಕೋಟೆಯನಲ್ಲಿ ಕಟ್ಟುವಷ್ಟಿದೆಯೋ?
ಕಲ್ಲಿನಾ ಗಟ್ಟಿಯೊಡೆಯದಷ್ಟಿದೆಯೋ?
ಮೇಲೆನ್ನ ಹೆಸರೊಂದು ಕೆತ್ತುವಷ್ಟಿದೆಯೋ?

ಆಯಾಸ ಕಳೆವಷ್ಟು ಅಗಲವಾಗಿದೆಯೋ?
ಹಾರಿ ಕುಣಿಯುವ ಹಾಗೆ ಆಳವಾಗಿದೆಯೋ?
ಕ್ರೋಧಮೋಹಗಳೆಲ್ಲ ನೆಗೆಯುವಂತಿದೆಯೋ?
ಪಾಪಬಿಂಬವು ತುಂಬಿ ತುಳುಕುವಷ್ಟಿದೆಯೋ?

ಬೇಡವೆಲೆ ಚಪಲಮನ! ಮೇರೆಯೊಂದೇಕೆ?
ಕಣ್ಣು ಕಂಡಿಹ ಕಲ್ಲ ನಿಲುವೊಂದು ಸಾಕೆ?
ಸೃಷ್ಟಿಮೂಲದ ಚಿತ್ತಕಲ್ಪನೆಯ ಹರಹಿ
ತಾನಲ್ಲಿ ತಾನನವ ತಂತಾನೆ ಸಲಹಿ

ಜಗದಗಲ ತೂರಿ ಹೆಸರಕಂತೆಯನೆಲ್ಲ
ಬಯಲ ಬೆಳಕಲಿ ಸಾಗಿ ವರ್ಣದೊಳು ಬಾಗಿ
ವಿಸ್ತಾರಶೂನ್ಯದೊಳು ವಿಶ್ರಾಂತಿಯಾವರಿಸೆ
ಪೃಕೃತಿಗರ್ಭದಿ ಮಲಗು ಮಗುವಾಗಿ ಮಾಗಿ

ಡಿ.ನಂಜುಂಡ
21/10/2015


ಮಂಗಳವಾರ, ಸೆಪ್ಟೆಂಬರ್ 29, 2015

ರಾವಣನ ನೆನೆ ನರನೆ!

ಅನುದಿನವು ನೂರು ಸಲ ರಾವಣನ ನೆನೆ ನರನೆ!
ಬಂದಾನು ಶ್ರೀರಾಮ ನಿನ್ನ ಬಳಿಗೆ
ದುಷ್ಟಮನವದೇ ಲಂಕೆ ಎಂದವನು ತಿಳಿದಾನು
ಅದ ಸುಡಲು ಸಾಕವಗೆ ಅರ್ಧ ಘಳಿಗೆ

ನೂರಾರು ಸ್ತ್ರೀಯರನು ಚಿತ್ತದೊಳು ಛಾಪಿಸುತ
ಹೊತ್ತೊಯ್ದು ಬಚ್ಚಿಟ್ಟ ಪಾಪಿಷ್ಠ ನೀನು
ಭಾವಬಿಂಬದೊಳಿಟ್ಟು ಮೋಹಿಸಿದ ಮಾಯಾವಿ
ಹತ್ತು ತಲೆ ರಾವಣನ ತದ್ರೂಪಿ ನೀನು

ರಾವಣನ ನೆನೆನೆನೆದು ರಾವಣನೆ ನೀನಾಗು
ಸಾಕ್ಷಿಯಲಿ ಶ್ರೀರಾಮನೆಚ್ಚೆತ್ತು ಬರಲಿ
ರಾಮನೊಡ ಕಾದಾಡೆ ರಾವಣಾಂಶವು ಮಡಿದು
ಕಾಮಾದಿ ರಾಕ್ಷಸರ ಹುಟ್ಟಡಗುತಿರಲಿ

ಡಿ.ನಂಜುಂಡ
29/09/2015


ಮಂಗಳವಾರ, ಸೆಪ್ಟೆಂಬರ್ 22, 2015

ಪ್ರಕೃತಿಪದಗಳು

ಸ್ಥವಿರಗಿರಿಯ ಭಾವಗಳೇ
ಹರಿವ ಹೊನಲ ಹಾಸವು
ಜಲಪಾತದೊಳಿಳಿದು ಬಸಿಯೆ
ಜಲಧಿತಳದ ಮೌನವು

ತರುಲತೆಗಳ ಮನದಲೆಗಳೇ
ತಂಬೆಲರಿನ ಸ್ವರಗಳು
ಚಿಗುರಿನೊಗರಿನಕ್ಷರಗಳೇ
ಖಗಚರಗಳ ಉಲಿಗಳು

ಕಡಲ ಮಾತಿನಬ್ಬರಗಳೇ
ಮುಗಿಲೆಳೆದಾರ್ಭಟಗಳು
ಮಿಂಚಂಚಿನ ಸಿಡಿಗೋಪಕೆ
ಇಳೆಗಿಳಿದಿಹ ಮಳೆಗಳು

ಅಚಲ ತತ್ತ್ವಭಾವಗಳೇ
ನಿತ್ಯ ಚಲಿಪ ಬಲಗಳು
ನಿಯತವಾಗಿ ಹಾಡಿ ನಲಿವ
ಪ್ರಕೃತಿಲೀನಪದಗಳು
  
ಡಿ.ನಂಜುಂಡ

22/09/2015

ಶುಕ್ರವಾರ, ಸೆಪ್ಟೆಂಬರ್ 18, 2015

ಇಪ್ಪೆ ಮರ

ಬಾಲ್ಯದಲಿ ಎಷ್ಟು ಸಲ ನಿನ್ನೇರಿ ಆಡಿದರೂ
ಒಮ್ಮೆಯೂ ನೀ ಮುನಿಸ ತೋರಲಿಲ್ಲ
ಹೂವೊಲವ ಸಿಹಿಯುಣಿಸಿ ಮನ ತಣಿಸಿದಾ ಇಪ್ಪೆ
ಮರವೇ! ನೀ ಹೀಗೆ ಕೆಳ ಬಿದ್ದೆಯಲ್ಲ!

ನಿನ್ನೊಡಲ ಕುಡಿಯೇಕೆ ಚಿಗುರೊಡೆಯಲಿಲ್ಲ?
ಬೇರೆಲ್ಲ ನೆಲದಿಂದ ಬೇರಾಯಿತಲ್ಲ
ರಸ್ತೆಯಗಲಿಸಿ ನಿನ್ನ ನೆಲಕೆ ದೂಡುವ ಕ್ಷಣದಿ
ನೀನೇಕೆ ಚೀರಿ ಕೂಗಾಡಲಿಲ್ಲ?

ಬಿದ್ದರೂ ಕೆಳಗೆ ನೀನೊದ್ದಾಡುತಿಲ್ಲ
ಮೈತುಂಬ ಪಾಚಿ ಹಸಿರುಡಿಸಿತಲ್ಲ
ತಾಯಿಬೇರೊಣಗೊಣಗಿ ಮಣ್ಣಾಗುತಿದ್ದರೂ
ಗೋಳಿನಲಿ ಒಮ್ಮೆಯೂ ಗೊಣಗುತಿಲ್ಲ

ನೋವುಗಳನೆಂದೆಂದೂ ತೋಡಿಕೊಳಲಿಲ್ಲ 
ತಾಳ್ಮೆಯಾ ಗುಟ್ಟೆನಗೆ ಹೇಳಲೇ ಇಲ್ಲ
ನಿನ್ನೆದುರು ನಾನಿಂದು ಬಂದು ನಿಂತಿಹ ಕ್ಷಣದಿ
ಭಾವಸುಮಗಳು ಹೀಗೆ ಚೆಲ್ಲಾಡಿತಲ್ಲ
ಇದಕಿಂತ ಬೇರೊಂದೂ ನನಗೆ ಗೊತ್ತಿಲ್ಲ.
ಡಿ.ನಂಜುಂಡ

21/09/2015