ಬುಧವಾರ, ಅಕ್ಟೋಬರ್ 29, 2014

ಏಕೆ?

ಬಯಲಲಿ ಹರಡಿಹ ದೇವನ ಕಾಣಲು
ಗುಡಿಗೋಪುರಗಳು ನಮಗೇಕೆ?
ಎಲ್ಲದರೊಳಗೂ ಸಮತೆಯ ಕಾಣಲು
ಗುಣವರ್ಣನೆಗಳು ಇರಬೇಕೆ?

ನಮ್ಮೊಳಗಿರದಿಹ ಒಳ್ಳೆಯತನಗಳ
ಸ್ತುತಿಪಾಠಕೆ ಬಳಸುವುದೇಕೆ?
ಆಶಾಕುಸುಮಗಳೆಲ್ಲವ ಬಿಟ್ಟು
ಫಲಪುಷ್ಪಗಳರ್ಪಣೆಯೇಕೆ?

ಭಾವಾತೀತನಲೊಂದಾಗುವುದಕೆ
ಉದ್ವೇಗದ ಭಜನೆಗಳೇಕೆ?
ಅಂಟುಗಳಿಲ್ಲದ ದೇವನ ಪೂಜೆಗೆ
ಮಡಿಮೈಲಿಗೆಗಳ ನಂಟೇಕೆ?

ಡಿ.ನಂಜುಂಡ

29/10/2014

ಬುಧವಾರ, ಅಕ್ಟೋಬರ್ 22, 2014

ಸೂರ್ಯೋದಯ

ಅತ್ತ ಮುಗಿಲಲಿ ಬೆಳ್ಳಿ ಮೂಡಿತು
ಕತ್ತಲುದರವು ಸೀಳಿತು
ಮತ್ತಕೋಕಿಲಚಾರುನಿಸ್ವನ-
ವಿತ್ತ ಬುವಿಯೊಳು ಮೊಳಗಿತು

ಕಂದನೋರ್ವನು ಕಣ್ಣ ಬಿಟ್ಟನು
ಬಂದನಾ ಗಿರಿಯೋರೆಗೆ
ಅಂದಚಂದದ ರಂಗನಿತ್ತನು
ಇಂದು ನಿನ್ನೆಯ ಸಂಧಿಗೆ

ಬಾನ ಮಲ್ಲಿಗೆ ಹೂವ್ಗಳೆಲ್ಲವು
ಬನದ ಮಾಳಿಗೆಗಿಳಿಯಲು
ಮೌನಗಾನದೊಳವಿತ ತಾನಕೆ
ಹನಿಗಳಾಡುತ ಕುಣಿಯಲು

ಎಲ್ಲ ಖೇಚರಗಳಿಗೆ ಕಾತರ
ಬೆಳಕ ಹಬ್ಬದ ಸಡಗರ
ಮೇಲೆ ಹಾರುವ ದೂರ ಸಾಗುವ
ಕಾಳ ಹೆರಕುವ ಆತುರ

ಕಾಲತಾಳಕೆ ಕುಣಿವ ವಿಶ್ವದ
ಮೂಲದಲ್ಲಿರೆ ಸೂತ್ರವು
ನಾಳೆಯಾಗುವ ಸೂರ್ಯನುದಯಕೆ
ಬೆಳಕು-ಕತ್ತಲ ಗಣಿತವು

ಡಿ.ನಂಜುಂಡ
22/10/2014



ಮಂಗಳವಾರ, ಅಕ್ಟೋಬರ್ 14, 2014

ಸಹಜ

ಚೆಲ್ಲದಿಹುದೆ ಪ್ರಕೃತಿಯೊಲವು
ಎಲ್ಲರೆದೆಯೊಳಿಳಿಯದೇ?
ಬೇಲಿಯೆಲ್ಲೆ ಮೀರಿ ಹೂವು
ಗಾಳಿಯನ್ನು ತೀಡದೇ?

ಮಣ್ಣ ಕಣದ ಸಾರವೆಲ್ಲ
ಹಣ್ಣ ತಿರುಳಿಗೇರದೇ?
ಬಣ್ಣದಳೆದ ಬುವಿಯ ಚೆಲುವು
ಕಣ್ಣ ಸೆಳೆಯದಿರುವುದೇ?

ಮಳೆಯ ಹನಿಗಳಿಳೆಗೆ ಜಾರಿ
ಬೆಳೆಯು ಬಾಗದಿರುವುದೇ?
ಆಳಕಿಳಿದ ಜಲವು ಮತ್ತೆ
ಮೇಲಕೇರಿ ಬಾರದೇ?

ಕಾಲದÀಳತೆಯನ್ನು ಮೀರಿ
ನಾಳೆಯಿಂದಿಗಿಳಿವುದೇ?
ಬಾಳ ಗಾಲಿಯರೆಗಳುರುಳಿ
ಇಳಿದು ಮೇಲಕೇರದೇ?

ಎಲ್ಲ ಬೇಕು ಎಂಬ ಸೊಲ್ಲಿ-
ಗೆಲ್ಲಿ ನಿಯತಲಯವಿದೆ?
ಸೋಲು ಗೆಲುವು ಬಾರದೆಂದೂ
ತಾಳನಿಯಮವಿಲ್ಲದೆ.

ಡಿ.ನಂಜುಂಡ

15/10/2014

ಶುಕ್ರವಾರ, ಅಕ್ಟೋಬರ್ 10, 2014

ಬೆಳಕಿನ ಬಿಂಬ

ಬಿಳಿಯೊಳಗಿಳಿಯದೆ ಕಣ್ ಕಾಣುವುದೇ?
ಒಳದನಿಗೂಡದ ಪದವುಳಿಯುವುದೇ?

ಬಾನೊಳು ಬಾಗಿದ ಬಣ್ಣಗಳೇಳವು
ಬಳುಕುವ ಭಾವದಲಿಳಿಯುತಿವೆ
ಬೇಕುಗಳೆಲ್ಲದರೊಳಮೈಯಾಗಿಸಿ
ಬಿಂಬಕೆ ಮೋಹವ ತುಂಬುತಿವೆ

ಚಿತ್ತದಿ ಮೂಡುವ ಚಿತ್ರಗಳೆಲ್ಲವು
ಬತ್ತದ ಕನಸುಗಳಾಗುತಿವೆ
ತೀರದ ವಿಧವಿಧ ಬಯಕೆಗಳೆಲ್ಲವು
ಕವಿತೆಗಳೊಳದನಿಯಾಗುತಿವೆ

ಕಣ್ಣೊಳಗಿಳಿದಿಹ ವಸ್ತುಗಳೆಲ್ಲವು
ಕಾಮನಬಿಲ್ಲುಗಳಾಗುತಿವೆ
ಮುಗಿಯದ ಚಿತ್ರಗಳೋಕುಳಿಯಾಟಕೆ
ಪದಗಳು ಕುಣಿಕುಣಿದಾಡುತಿವೆ

ಬಣ್ಣಗಳೇಳವು ಬಿಳಿಯೊಳು ಬಾಗುತ
ಕಣ್ಣೊಳ ಬಿಲ್ಲಿನ ಶರವಾಗೆ
ಕಾಣುವುದೊಂದೇ ಬೆಳಕಿನ ಬಿಂಬವು
ಕನಸುಗಳೆಲ್ಲವು ಮರೆಯಾಗೆ.

ಡಿ.ನಂಜುಂಡ
11/10/2014


ಬುಧವಾರ, ಅಕ್ಟೋಬರ್ 8, 2014

ಭೂಪ್ರಾರ್ಥನೆ

ಉತ್ತಿ ಎಮ್ಮಾಸೆಗಳ ಅಂಕುರದ ಒಳಗಿರ್ಪ
ಬತ್ತದಾ ಮಣ್ಣಿನೊಳ ಉತ್ಸಾಹಕ್ಕೆ ಶರಣು
ಅತ್ತಾಗ ತುತ್ತಿಡುವ ಸತ್ತಾಗ ಹೂತಿಡುವ
ನಿತ್ಯಪರಿಪೂರ್ಣತತ್ತ್ವಕ್ಕೆ ಶರಣು

ಭೂಮಿಮಾತೆ! ಸುಖಶಾಂತಿದಾತೆ!
ಅಭಯಪ್ರದಾತೆ!

ಆಕಾಶವಾಯ್ವಗ್ನಿಜಲಭೂತಸಂಶಕ್ತಿ-
ಯುಕ್ತಾತ್ಮಚೈತನ್ಯಸತ್ಯಸಂಗೀತೆ
ಭಕ್ತಿರಸಪರಮಾನ್ನನೈವೇದ್ಯಸಂಪ್ರೀತೆ
ಅಖಿಲಜಗಜೀವಕುಲಕೇಕೈಕ ಮಾತೆ

ಕಾಮಾದಿ ಷಡ್ವೈರಿ ದುಸ್ಸಂಗದಿಂದೆದ್ದ
ಮಮಕಾರಹವ್ಯಗಳನರ್ಪಿಸುವೆ ತಾಯೆ
ತಾಮಸಿಕ ಗುಣದೋಷದಾವರಣವನು ಹರಿದು
ಸಾಮರಸಗುಣಗಳಿಂದಾವರಿಸು ತಾಯೆ

ಆರೋಗ್ಯ ವೈರಾಗ್ಯ ಭವಯೋಗ್ಯ ಭಾಗ್ಯಗಳ
ಸಾರಥ್ಯದಿಂದಲೀ ರಥವು ಚಲಿಸುತಿರಲಿ
ಚರಯೋಗಸಂಸಿದ್ಧಭೋಗಸಂವೃದ್ಧಿಗಳು
ಪರಮಪದಸಂಬಂಧಸೂತ್ರದೊಳಗಿರಲಿ
ವರಭೂಮಿಮಾತೃಕೆಯ ಚರಣಗಳಲಿರಲಿ

ಡಿ.ನಂಜುಂಡ
08/10/2014



ಮಂಗಳವಾರ, ಅಕ್ಟೋಬರ್ 7, 2014

ಬಾ ಲಲಿತೆ!

ನಲಿನಲಿದಾಡುತ ಬಾ ಲಲಿತೆ!
ನಲವಿನ ಪೂವಿಡು ಭಾವಲತೆ!

ಚೆಲುವಿನ ಚಿಗುರಲಿ ಗೆಲುವಿನ ಗೆಲ್ಲಿಡು
ಮೊಲ್ಲೆಯ ಹೂನಗೆ ಚೆಲ್ಲಾಡು
ಒಲವಿನ ಕುಡಿಕುಡಿಮೇಲಡಿಯಿಡು ನೀ
ಗಲ್ಲದ ಕುಳಿಯೊಳಗೋಲಾಡು

ಕಣಕಣವರಳಿಸಿ ಜೇನ್ಮಳೆಹನಿಯಿಡು
ಕಣ್ಣೊಳು ದಿನಕರಕಿರಣವಿಡು
ದನಿಯೊಳು ಪದಸುಮಕೇಸರಗಳನಿಡು
ಮನಕಾನನದೊಳು ಸುಳಿದಾಡು

ವದನದಿ ಶ್ರೀಶಿವಮಂತ್ರದ ಝಣವಿಡು
ಪದದೊಳಗರ್ಥದ ಚಿತ್ರವಿಡು
ವಿಧವಿಧ ವರ್ಣಗಳಾಕೃತಿದಲವಿಡು
ಹೃದಯಸರೋಜದಿ ಕುಳಿತುಬಿಡು

ಡಿ.ನಂಜುಂಡ
07/10/2014



ಭಾನುವಾರ, ಅಕ್ಟೋಬರ್ 5, 2014

ಯಜ್ಞ

ಭಾವವೇ ಬಾ ಇಲ್ಲಿ ಭವಯೋಗಿಯಾಗು
ರವವಾಗಿ ಕಲವರಿತ ಕವಿತೆಯಾಗು

ಅಗೆಯಾಗಿ ಬಾಗು ಕಾಳ್ದೆನೆಯಾಗಿ ನೀ ತೂಗು
ಮೊಗದ ನಗುಹೂವಿನೊಳ ಮಕರಂದವಾಗು
ಸಾಗಿ ನೀ ಸಂಸಾರಕೃಷಿಭೂಮಿಫಲದೊಳಗೆ
ಜಗದಗ್ನಿಕುಂಡದೊಳು ನೈವೇದ್ಯವಾಗು

ಮುಗಿಲಾಗಿ ಮೇಲ್ಜಿಗಿದು ಮಳೆಯಾಗಿ ಕೆಳಗಿಳಿದು
ಬಗೆಬಗೆಯ ಜಲಮೂಲಚೈತನ್ಯವಾಗು
ಜಗದಗಲ ನೀ ಹರಡಿ ಝಗಮಗಿಪ ಬೆಳಕಾಗು
ಆಗಸದ ರವಿಯುದರಕಾಂತಿಯೊಳು ಬಾಗು

ಮಣ್ಣಾಗು ತರುಮೂಲಸಾರದೊಳು ಒಂದಾಗು
ಹಣ್ಣಿನೊಳ ತಿರುಳಾಗಿ ಪರಿಪಕ್ವವಾಗು
ಕಣ್ಣಾಗು ಕಷ್ಟಸುಖದಜ್ಞಾನರಾತ್ರಿಯಲಿ
ಅನ್ನರಸಕೋಶಾಗ್ನಿಪದಕೆ ಶರಣಾಗು

ಸೃಷ್ಟಿವೈವಿಧ್ಯಮಯವರ್ಣಾಂತರಾಲವದು
ದೃಷ್ಟ್ಯಾದಿ ಕರಣಗಳ ಗುರಿಯಾಗುತಿರಲಿ
ವ್ಯಷ್ಟಿಚಿಂತಿತವಸ್ತುವಿಷಯಾಜ್ಯಹುತವಾಗಿ
ಇಷ್ಟಿಪರಿಪೂರ್ಣತೆಯ ಸಂತುಷ್ಟಿಯಿರಲಿ

ಡಿ.ನಂಜುಂಡ

05/10/2014

ಶುಕ್ರವಾರ, ಅಕ್ಟೋಬರ್ 3, 2014

ಹಬ್ಬಗಳಾವಳಿ

ಆಹಾ! ಬಂದಿತು ಹಬ್ಬಗಳಾವಳಿ;ಮನೆಮನೆಯಲಿ ಸಂಭ್ರಮಕೇಲಿ
ಅಡುಗೆಯ ಪಾತ್ರೆಗಳಾಡುತಿರೋಕುಳಿ ವಿಧವಿಧ ಷಡ್ರಸಪಾಕದಲಿ 
ಮನವಿರೆ ಯೋಗಸಮಾಧಿಯಲಿ;ಸವಿ ಭೋಜನಸಂಸಿದ್ಧಿಯಲಿ
ಪಂಚೇಂದ್ರಿಯಗಳು ಒಂದೆಡೆಗೂಡಿವೆ;ಒಬ್ಬಟ್ಟಿನ ರುಚಿಕಟ್ಟಿನಲಿ

ಸಾರೊಳಗದ್ದಿಹ ಸೌಟಿನ ಸದ್ದಿಗೆ ಕಿವಿಗಳು ಎದ್ದೆದ್ದೇಳುತಿವೆ;
ರುಚಿರುಚಿಯಡುಗೆಗಳೂಟದ ಚಪಲಕೆ ರಸನದಿ ಜಲವೊಸರುಕ್ಕುತಿದೆ
ಹೊಟ್ಟೆಯು ಚುರುಗುಟ್ಟುತಿದೆ;ತೇಗುವ ಕ್ಷಣಗಳನೆಣಿಸುತಿದೆ
ಉದರದೊಳಗ್ನಿಯ ಜ್ವಾಲಾಮಾಲೆಯು ಯಾಗಸಮಾಪ್ತಿಗೆ ಕಾಯುತಿದೆ

ಅಟ್ಟದ ಮೇಲಿನ ಡಬ್ಬದೊಳಿಟ್ಟಿಹ ಹಪ್ಪಳಗಳು ಕೆಳಗಿಳಿಯುತಿವೆ
ಕುದಿಯುವ ಎಣ್ಣೆಯ ಬಾಣಲೆಯೊಳಗಡೆ ಮುಳುಗುತಲೇಳುತಲುಬ್ಬುತಿವೆ
ಬಾಳಕಗಳು ಗರಿಯಾಗುತಿವೆ; ಬಾಯೊಳಗಿಳಿಯಲು ಕಾಯುತಿವೆ
ತರತರ ಹೊಸ ತರಕಾರಿಗಳೆಲ್ಲವು ಹದದುರಿಯೊಲೆಯಲಿ ಬೇಯುತಿವೆ

ಮೊಳಕೆಗÀಳೊಡೆದಿಹ ಬಗೆಬಗೆ ಕಾಳ್ಗಳು ಗಜ್ಜರಿತುರಿ ಜೊತೆಗೂಡುತಿವೆ
ಹಸಿಮೆಣಸಿನ ತುಣುಕುಗಳೊಂದಿಗೆ ತೆಂಗಿನ ಸಂಗದೊಳಾಡುತಿವೆ
ಲಿಂಬೆಯ ರಸವನು ಹೀರುತಿವೆಸಾಸಿವೆಗಳು ಚಟಪಟಿಸುತಿವೆ
ಹಸಿ ಕೊತ್ತಂಬರಿ ಸೊಪ್ಪುಗಳಂದದಿ ಕೋಸಂಬರಿಯನು ಚುಂಬಿಸಿವೆ

ಬಂದಿತು ಕ್ಷಣವೊಂದಿನಿತೂ ಕಾಯದೆ ತುಪ್ಪದ ಘಮಘಮವೂಡುತಲಿ.
ಅಡುಗೆಯ ಮಂಗಳವಾದ್ಯದ ಸದ್ದಿರೆ ಸಟ್ಟಗದೊಳಮೈಕಟ್ಟಿನಲಿ
ತಂದಿಟ್ಟಿಹ ಹೊಸ ಬಟ್ಟಲಲಿ; ಕೈಬಾಯ್ಗಳ ಒಗ್ಗಟ್ಟಿನಲಿ
ಒಂದರ ಮೇಲೊಂದಡಿಗೆಗಳೆಲ್ಲವು ಉದರದೊಳಿಳಿದಿವೆ ಸರದಿಯಲಿ.

ಡಿ.ನಂಜುಂಡ
04/10/2015