ಭಾನುವಾರ, ಅಕ್ಟೋಬರ್ 5, 2014

ಯಜ್ಞ

ಭಾವವೇ ಬಾ ಇಲ್ಲಿ ಭವಯೋಗಿಯಾಗು
ರವವಾಗಿ ಕಲವರಿತ ಕವಿತೆಯಾಗು

ಅಗೆಯಾಗಿ ಬಾಗು ಕಾಳ್ದೆನೆಯಾಗಿ ನೀ ತೂಗು
ಮೊಗದ ನಗುಹೂವಿನೊಳ ಮಕರಂದವಾಗು
ಸಾಗಿ ನೀ ಸಂಸಾರಕೃಷಿಭೂಮಿಫಲದೊಳಗೆ
ಜಗದಗ್ನಿಕುಂಡದೊಳು ನೈವೇದ್ಯವಾಗು

ಮುಗಿಲಾಗಿ ಮೇಲ್ಜಿಗಿದು ಮಳೆಯಾಗಿ ಕೆಳಗಿಳಿದು
ಬಗೆಬಗೆಯ ಜಲಮೂಲಚೈತನ್ಯವಾಗು
ಜಗದಗಲ ನೀ ಹರಡಿ ಝಗಮಗಿಪ ಬೆಳಕಾಗು
ಆಗಸದ ರವಿಯುದರಕಾಂತಿಯೊಳು ಬಾಗು

ಮಣ್ಣಾಗು ತರುಮೂಲಸಾರದೊಳು ಒಂದಾಗು
ಹಣ್ಣಿನೊಳ ತಿರುಳಾಗಿ ಪರಿಪಕ್ವವಾಗು
ಕಣ್ಣಾಗು ಕಷ್ಟಸುಖದಜ್ಞಾನರಾತ್ರಿಯಲಿ
ಅನ್ನರಸಕೋಶಾಗ್ನಿಪದಕೆ ಶರಣಾಗು

ಸೃಷ್ಟಿವೈವಿಧ್ಯಮಯವರ್ಣಾಂತರಾಲವದು
ದೃಷ್ಟ್ಯಾದಿ ಕರಣಗಳ ಗುರಿಯಾಗುತಿರಲಿ
ವ್ಯಷ್ಟಿಚಿಂತಿತವಸ್ತುವಿಷಯಾಜ್ಯಹುತವಾಗಿ
ಇಷ್ಟಿಪರಿಪೂರ್ಣತೆಯ ಸಂತುಷ್ಟಿಯಿರಲಿ

ಡಿ.ನಂಜುಂಡ

05/10/2014

1 ಕಾಮೆಂಟ್‌:

  1. ಸಕಾರಾತ್ಮಕ ಭಾವ ಚಿಂತನೆಯನ್ನು ಪ್ರೇರೇಪಿಸುವ ಕವನವಿದು.
    ತರುಮೂಲಸಾರ ಒಳ್ಳೆಯ ಪದ ಪ್ರಯೋಗ.

    ತಮ್ಮನ್ನು ಫೇಸ್ ಬುಕ್ಕಿನ 3K ಗುಂಪಿಗೆ ಸೇರಿಸಿದ್ದೇನೆ. ಅಲ್ಲಿ ತಮ್ಮ ಬ್ಲಾಗನ್ನೂ share ಮಾಡಿದ್ದೇನೆ.
    https://www.facebook.com/groups/kannada3K/permalink/435285689889320/

    ಪ್ರತ್ಯುತ್ತರಅಳಿಸಿ