ಗುರುವಾರ, ಡಿಸೆಂಬರ್ 28, 2017

ಪಲ್ಲವಿಸು ಹೇ ಪೃಕೃತಿ!

ಪಲ್ಲವಿಸು ಹೇ ಪೃಕೃತಿ! ಸೊಲ್ಲುಸೊಲ್ಲುಗಳಲ್ಲಿ
ಮೊಲ್ಲೆ ಬಳ್ಳಿಯು ಹರಹಿ ಹಬ್ಬುವಂತೆ
ಕಲ್ಲುಮುಳ್ಳುಗಳರ್ಥಸುಮಗಂಧದೊಳು ಬೆಸೆದು
ಚೆಲ್ಲಾಟವಾಡುತ್ತ ಕುಣಿಯುವಂತೆ

ಚಿತ್ತೈಸು ಹೇ ಪ್ರಕೃತಿ! ಚಿದ್ರೂಪತನುವಾಗಿ
ತತ್ತ್ವಾರ್ಥಭಾವದೊಳು ನಿತ್ಯವಾಗಿ
ಸತ್ಯಾತ್ಮದಾನಂದಪದಬಂಧರತಿಯಾಗಿ
ಮಿಥ್ಯಗೋಚರದಿಂದ ಮುಕ್ತವಾಗಿ

ಅಂತರಂಗದ ಮೌನ ತಾನನಂತದಿ ಬಾಗಿ
ಸಂತತವು ವಾಕ್ಕಾಯರೂಪವಾಗು
ಶಾಂತತೆಯ ಸೊಬಗಾಗುವಂತೆ ನೀನೆಲೆ ಪ್ರಕೃತಿ!
ಚಿಂತನೆಯ ಚಿತ್ರದೊಳ ಜೀವವಾಗು

ಡಿ.ನಂಜಂಡ
28/12/2017



ಭಾನುವಾರ, ಡಿಸೆಂಬರ್ 24, 2017

ಬಾನಲೂಡು ದೇವ

ಪ್ರಾಣಿದಯೆಯನೆದೆಯಲಿರಿಸಿ
ದಾನವಗುಣವಳಿಸು
ಕಾನನಕಲಕಂಠದೊಲವ-
ನಾನನದೊಳಗಿರಿಸು

ಬಾನಿನೆಲ್ಲೆ ತಿಳಿಯಲೋಡಿ
ತಾನನದೊಳಗಾಡೆ
ಗಾನಸೂತ್ರಮಾತ್ರದಿಂದ
ತಾನೆ ಬಾನಲೂಡೆ

ಮೌನದಾಳಕಿಳಿಸಿ ಪ್ರಕೃತಿ-
ಲೀನಗೊಳಿಸು ದೇವ
ಯಾನಪೂರ್ಣಸುಕೃತಿಯಲ್ಲಿ
ಕಾಣದಂತೆ ಭಾವ

ಡಿ.ನಂಜುಂಡ

24/12/2017

ಶನಿವಾರ, ಡಿಸೆಂಬರ್ 23, 2017

ಬೈರಾಗಿ

ತಂದಾನು ತಾನನವನಂದವಾಗಿ
ಬಂದಾನು ಬಾಂದಳದ ಬಂಧುವಾಗಿ

ಮೈಬೆವರ ಹನಿಯಿಳಿಸಿ ನೆಲದತ್ತ ಕೆಳ ಬಾಗಿ
ತನ್ನತನವನು ತೆನೆಗಳೊಳಗಿಳಿಸಿ ತೂಗಿ
ತಾನು ತಾನಲ್ಲವೆನೆ ಧೂಲಿಕಣದಂತಾಗಿ
ಮೇಲೆ ಸಾಗುವನು ಬಹಳ ಹಗುರಾಗಿ

ಹಣವನೆಣಿಸುವ ಸುಖದ ಸುಳಿಯೊಳಗೆ ಸುತ್ತುತಲಿ
ಮೇ¯ಕೇರದ ಹಾಗೆ ಶವಭಾರವಾಗಿ
ರೋಗಿಯಂತಾಗುತಿಹ ಬಹು ಬಲ್ಲಿದರಿಗಾಗಿ
ಮಣ್ಣಿನನುರಾಗಿ ತಾನೀಯುತಿಹ ರಾಗಿ

ಮಾತುಮಾತೊಳಗರ್ಥರಸವನಿರಿಸುವರಾಗಿ
ರಾಗವರಸುತÀ ಬರೆದ ಕವಿಗಳಂತಾಗಿ
ತಾನುಳಿಯದೇ ನೆಲವನುಳುವವನು ತಾನಾಗಿ
ಬಾನ ರಾಗದೊಳಿಹನು ನಮ್ಮ ಬೈರಾಗಿ

ಡಿ.ನಂಜುಂಡ
23/10/2017

ಶನಿವಾರ, ಡಿಸೆಂಬರ್ 16, 2017

ಕಚ್ಚು ಬಾ, ಸೊಳ್ಳೆ!

ಗೊಚ್ಚೆಯಿಂದೆದ್ದು ಬಾ, ಸೊಳ್ಳೆ ನೀ ಹಾಡುತ್ತ
ಕಚ್ಚು ನಾನೆಚ್ಚರದಲೇಳುವಾ ಹಾಗೆ
ಸ್ವಚ್ಛಗೊಳ್ಳುವೆನೆಂದು ಮೈಮನವ ತೊಳೆತೊಳೆದು
ರೊಚ್ಚುಗಳನಲ್ಲಲ್ಲಿ ನಿಲ್ಲಿಸದ ಹಾಗೆ
ಸ್ವಚ್ಛಭಾರತವೆಂಬ ಸಂಕಲ್ಪದರ್ಥವನು
ತಿಳಿವರೆಗೆ ಕೆಂಪಚ್ಚುಗಳ ನರಗಳಲ್ಲಿ
ಮೂಡಿಸುತ ಮೈಕೊಡವಿ ಮೇಲೆದ್ದು ಬರುವಂತೆ
ಗುಂಯಿಗುಡುತಲಿರು ನೀ ಮನೆಮನೆಗಳಲ್ಲಿ
ಸೂಕ್ಷ್ಮಾಣುಜೀವಿಗಳು ತಿನ್ನದಿಹ ವಸ್ತುಗಳ-
ನಲ್ಲಲ್ಲಿ ಒಗೆಯುತಿರೆ ನೀನಲ್ಲಿ ಹುಟ್ಟು
ಜಗಿಜಗಿದು ಕಂಡಲ್ಲಿ ಉಗಿದುಗಿದು ಕೆಂಪಾದ
ಗುರುತುಗಳ ತಂದು ನೀ ಮೈಮೇಲಕೊಟ್ಟು
ಪರಿಸರದ ಭಾಗದೊಲು ನಾನಿರುವ ಕಾಲವದು
ಬರುವವರೆಗೂ ನಿನ್ನ ಸಂತಾನವಿರಲಿ
ಎಲ್ಲ ನನಗಾಗೆಂಬ ಸ್ವಾರ್ಥದಾ ಸೋಗಿರಲು 
ನಿನ್ನಿರವು ಸರ್ವಾರ್ಥದರಿವಿಗಾಗಿರಲಿ
ಡಿ. ನಂಜುಂಡ
16/12/2017


ಮಂಗಳವಾರ, ಡಿಸೆಂಬರ್ 12, 2017

ವರವಾಗಿ ಬಂತೆ ಕಾಗೆ!?

ಕರಿಯುಂಡ ಕಾಗೆ ಕಾಯೆಂದು ಕೂಗೆ
ಹರಿವೊಂದು ಹರಿಯುತೆದೆಗೆ
ಹರ ತಾನು ಬಾಗುತರಿವೊಳಗೆ ಸರಿದು
ಗುರುವಾಗುತೆದ್ದ ಹಾಗೆ

ನರನರರÀ ನಂಜ ಮಾತುಗಳ ಹಿಂಜಿ
ಕರಿಯಾಗುತಿರಲು ರಾತ್ರಿ
ಸರಿಗೊಳಿಸಲದನು ಹಗಲೆಡೆಗೆ ತೂರಿ
ತಿರುತಿರುಗುತೇಳೆ ಧಾತ್ರಿ

ಒಳಗೆಲ್ಲ ತುಂಬಿ ತುಳುಕಾಡುತಿರುವ
ಕೊಳೆಗಳನು ಹೊರಕೆ ತೂರಿ
ಬೆಳಕೊಂದು ಬಂದು ಬೆಳಗಾಯಿತೆಂದು
ತಿಳಿಹೇಳಿದಂತೆ ಸೂರಿ

ಧರೆಯೆಸೆದ ಕರಿಯನರೆದರೆದು ಕುಡಿದು
ಗಿರಿಯತ್ತ ಹಾರಿ ಸಾಗೆ
ಅರಿವೊಳಗೆ ಕುಣಿವ ನಂಜುಂಡನಂತೆ
ವರವಾಗಿ ಬಂತೆ ಕಾಗೆ!?

ಡಿ.ನಂಜುಂಡ
12/12/2017




ಬುಧವಾರ, ನವೆಂಬರ್ 22, 2017

ಶನಿ



ಕರ್ಮಫಲವೀವ ಶನಿದೇವನೇ ಪರತತ್ತ್ವ
ಧರ್ಮಮಾರ್ಗಗಳನ್ನು ತೆರೆಯುವನು ನಿತ್ಯ
ಮಂದಗತಿಯಲಿ ಮತಿಯ ಮಥಿಸಿ ಮೋಹವನಳಿಸಿ
ಅಂತರಂಗವ ಬೆಳಗಿ ತೋರುವನು ಸತ್ಯ

ಅದು ಬೇಕು ಇದು ಬೇಕು ಎಂದು ಮನವೋಡುತಿರೆ
ದುಃಖಗಳ ತಡೆಗೋಡೆಯೊಂದ ತಂದೊಡ್ಡಿ
ವಿಷಯೋಪಭೋಗಗಳಲಂಟು ಬರದಾ ಹಾಗೆ
ಪಾಪಗಳ ಲೆಕ್ಕಕ್ಕೆ ನೀಡುತಲಿ ಬಡ್ಡಿ

ಈ ಜಗವೆ ನನಗಾಗಿ ನಾನೊಬ್ಬನಿದರೊಡೆಯ
ಎಂಬಂತೆ ಮಾನವನು ಬೀಗುತಿರಲಿಹದಿ
ಭಾವಾಗ್ನಿಜ್ವಾಲೆಯಲಿ ಸ್ವಾರ್ಥಬೀಜಗಳಿಟ್ಟು
ಸುಟ್ಟು ಕರಕಲುಗೊಳಿಸಿ ಮುಗುಳುನಗುಮೊಗದಿ

ಅಲ್ಪತೃಪ್ತನಿಗೆ ಅತಿಶಯದ ಸುಖಗಳನಿತ್ತು
ಅತಿಲೋಭಿಗಾತಂಕದುದ್ವೇಗವಿತ್ತು
ಜ್ಞಾನವೈರಾಗ್ಯಗಳನೀಯುತಲಿ ಸಾಗುವನು
ಸಮತೂಕದಲಿ ಸಚ್ಚಿದಾನಂದವುತ್ತು

ಡಿ.ನಂಜುಂಡ
22/11/2017

ಮಂಗಳವಾರ, ಸೆಪ್ಟೆಂಬರ್ 12, 2017

“ಸುದೃಢದೇಶವು ಭಾರತ”

ಸ್ವಾವಲೋಕಿತ ಸ್ವಸ್ಥಚಿಂತಿತ
ಭಾವಸಂಸ್ಕø ಶೋಭಿತ
ಸ್ವಾವಲಂಬಿತ ಶಕ್ತಿsಸಂಚಿತ
ಸ್ವಾಭಿಮಾನವು ಸಂತತ
ಧಾರೆಯಾಗಿಸಿ ಹೇಳಲೆಲ್ಲರು
ನಮ್ಮ ದೇಶವು ಭಾರತ

ಪಾಂಚಭೌತಿಕ ದೃಷ್ಟ್ಯಗೋಚರ
ಪರಮಕೌತುಕ ಶಕ್ತಿಯ
ಮನನಮಾತ್ರದಿ ಮಂತ್ರವಾಗಿಸಿ
ಸ್ತುತಿಸಿ ಸೃಷ್ಟಿಸಮಷ್ಟಿಯ
ನಿತ್ಯವರ್ಚನೆಗೈಯುತಿರಲಿ
ಪುಣ್ಯಭಾರತಭೂಮಿಯ

ವಿಶ್ವಮಾನವ ದೃಷ್ಟಿಕೋಣವ
ನಾಂತು ಶಾಂತಸುಭಾವದಿ
ಸ್ವಾರ್ಥದಾನವ ಕ್ರೌರ್ಯಕೋಟಿಯ
ನಿಸ್ಸ್ವಾರ್ಥತೆಯ ಶೂಲದಿ
ದಮನಗೊಳಿಸುವ ಪುಣ್ಯಭೂಮಿಯ
ಗಂಧವಿರಿಸುತ ನೊಸಲಲಿ
ಏಕಕಂಠದಿ ಹಾಡಲೆಲ್ಲರು
ಸುದೃಢದೇಶವು ಭಾರತ

ಡಿ.ನಂಜುಂಡ
29/08/2017
12/09/2017







ಶನಿವಾರ, ಆಗಸ್ಟ್ 26, 2017

ಗೋವ ಭಾವವ ತಾರೊ

ಗೋವ ಭಾವವ ತಾರೊ, ಗೋವಿಂದನೆ!
ಗೋಪಾಲನೆ! ಬಾ, ಗೋಕುಲಾನಂದನೆ!

ಚಣಚಣವು ನಾವುಲಿವ ವರ್ಣವರ್ಣದಲಿ
ನಿನ್ನಡಿಯ ಕಣಕಣಗಳಾವರಣವಿರಲಿ
ಅಲ್ಲಿ ಹಸುಗಳ ಕೊರಳ ಮರುಗುಣಿಗಳಿರಲಿ
ಕರ್ಣಮೋಹನಗಾನದನುರಣನವಿರಲಿ

ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿರಲಿ
ಒಳನೋಟದಾಟಗಳು ಸ್ವಚ್ಛವಾಗಿರಲಿ
ಧನವು ತಾ ದನವು ಮೈತೀಡಿದಾ ಮಣ್ಣ-
ಗುಡ್ಡದೊಲು ಕರಗಿಯೂ ಕರಗದಂತಿರಲಿ

ಗೋಮಾತೆಯರು ನಿಲುವ ನೆಲನೆಲಗಳೊಲವು
ಹೊಲಹೊಲದ ತೆನೆಗಳಲಿ ಹಾಲಾಗಿ ಬಲವು
ಜಗದ ಜನರುದರಗಳಲುರಿಯ ತಣಿಸುತಲಿ
ಅಮೃತಧಾರೆಯ ಸ್ನೇಹವೆರೆಯುವಂತಿರಲಿ


ಡಿ.ನಂಜುಂಡ
26/08/2017



ಶುಕ್ರವಾರ, ಆಗಸ್ಟ್ 11, 2017

ಲೀಲೆಯಾಟವ ನೋಡಿರೊ

ಬಾನ ನೀಲದ ಬಾಲಕೃಷ್ಣನ
ಲೀಲೆಯಾಟವ ನೋಡಿರೊ
ಚೆಲುವನೆಲ್ಲವ ಚೆಲ್ಲುತಾಡುತ
ಕುಣಿವ ಬಗೆಯನು ಕಾಣಿರೊ
ಕಾನು ಮಲೆಗಳ ಸಾಲುಸಾಲಿನ
ಮಾಲೆ ಧರಿಸಿಹ ಮುರುಳಿಯ
ಹಕ್ಕಿಗಳ ಕೊರಳಾಗಿ ಕಲರವ-
ದೊಳಿಹ ರಾಗವಿರಾಗಿಯ
ರವಿಯ ಚರಣದ ರೂಪರಾಜಿಯ
ಜಗದ ಹರಹಲಿ ಹರಿಸಿದ
ಕವಿಯ ಭಾವದ ಬಿಂಬವಾಗುತ
ಹರಹನದರೊಳಗಿಳಿಸಿದ
ಕಡಲಿನಲೆಗಳ ಮೇಲೆ ತೇಲುವ
ನೊರೆಗಳಂದದಿ ಕಾಣುವ
ಒಡಲಿನಲೆಗಳನಿಳಿಸುತೆಬ್ಬಿಸಿ
ಸಮತೆಯೆಡೆಗವನೆಳೆಯುವ
ನಾವು ನೋಡುವ ನೋಟದಾಳದೊ
ಳಾಟವಾಡುವ ಬಾಲನ
ಮಾತು ಮಾತುಗಳರ್ಥವಾಗಿಹ
ಅಕ್ಷರಾಕ್ಷರಜೀವನ
ಡಿ.ನಂಜುಂಡ
11/08/2017

ಬುಧವಾರ, ಆಗಸ್ಟ್ 2, 2017

ಕುಡಿಕೆಗಳನೊಡೆಯುವನೆ?

ಮೊಸರ ಕುಡಿಕೆಗಳನೊಡೆವನೆ? ಕೃಷ್ಣ
ತಾ ಮುಸಿಮುಸಿ ನಕ್ಕೋಡುವನೆ?
ತಲೆಯೊಳ ಗಡಿಗೆಯ ಮೊಸರನು ಕಡೆದು
ತೇಲಿದ ಬೆಣ್ಣೆಯ ಮುದ್ದೆಯ ಪಿಡಿದು
ಬಾಲರ ಭಾವಗಳೆಲ್ಲವನುಸಿರೊಳ-
ಗೆಳೆಯುತಲೂದುತ ಕೊಳಲನು ಮಿಡಿದು
ಬೆರಳೊಳಗಾರೂ ಚಕ್ರಗಳೆತ್ತಿ
ಗರಗರ ತಿರುಗಿಸಿ ವಕ್ರೀಭವಿಸಿ
ಆರರಿಗಳ ಕಡೆಗೆಸೆಯಲು ಬರುವನೆ?
ನರರೊಳು ಸರಸರ ಸಂಚಲಿಸಿ
ಕುಡಿಕೆಗಳೆಲ್ಲವನೊಡೆದೊಡೆದಾಡುತ
ಅಡಿಯಿಂ ಮುಡಿತನಕೋಡಾಡಿ
ಕಡೆಗೋಲಿನ ಹಾಗತ್ತಿತ್ತಾಡುತ
ಗಡಿಗೆಯೊಳಿರುವುದ ಚೆಲ್ಲಾಡಿ
ಬಯಲೊಳಗಾಡುವ ಬುಗುರಿಯಾಟಕೆ
ಬಯಲೆಡೆಗೆಲ್ಲರನೆಳೆಯುವನೆ?
ಬಯಲಿನ ನಾದವನೆದೆಯೊಳು ಬೆಸೆಯಲು
ಮಾಯದ ಕುಡಿಕೆಗಳೊಡೆಯುವನೆ?
ಹರಿ ತಾನರಿಗಳ ಹರಿಯುವನೆ?
ಅರಿವಾಗೆಮ್ಮೊಳು ಹರಿಯುವನೆ?
ಡಿ.ನಂಜುಂಡ
02/08/2017

ಮಂಗಳವಾರ, ಆಗಸ್ಟ್ 1, 2017

ಅನುಭವಿಸದೆ ನಾನಭಿನಯಿಸೆನು

ಅನುಭವಿಸದೆ ನಾನಭಿನಯಿಸೆನು ನಿನ
ನಾಟಕರಂಗದ ಪಾತ್ರಗಳ
ಬಳಿದ ಬಣ್ಣಗಳನಳಿಸುವ ಬಗೆಗಳ
ನರಿಯದೆ ಹಾಡುವೆ ಹಾಡುಗಳ
ಕೃಷ್ಣಾ! ನಿನ್ನಯ ಲೀಲೆಗಳ
ಸೂತ್ರದೊಳರ್ಥದ ಹೊಳೆವುಗಳ

ಕಡೆಯಿಂದಲಿ ನೋಡಲು ಪಿತನು
ಕಡೆಯಿಂದಲಿ ನಾ ಮಗನು
ಅಭಿನಯವರಿಯದೆ ಸಂಭಾಷಣೆಗಳ
ಮರೆಯುತ ತೊದಲುತಲಾಡುವೆನು
ಹಣೆಯೊಳು ಬರೆದಿಹ ಪದಗಳನು
ಮಧುರಸವಿಲ್ಲದೆಯೋದುವೆನು

ಕೃಷ್ಣಾ! ಎಂದೊಡೆ ನಿನ್ನಾಕರ್ಷಣೆ
ಯಿಂದಲಿ ರಂಗವು ರಂಗಾಗೆ
ನನ್ನೆದೆಮಣ್ಣಿನ ಬಯಲಲಿ ನಿನ್ನಯ
ಕೊಳಲ ತರಂಗವು ಹಾಯಾಗೆ
ಅಭಿನಯವನುಭವವನುಭವಿಯಿಹಭವಿ
ಯೆಲ್ಲವು ನಿನ್ನೊಳಗೊಂದಾಗೆ

ನೋಡುವ ನೋಟದೊಳಾಡುವ ಆಟವ
ಹೂಡಿದ ಸೂತ್ರಕೆ ತಲೆಬಾಗಿ
ಕಾಡುವ ನೋವನು ಬಾಡುವ ಬಾಳನು
ಹಾಡುವ ಕೊರಳಿಗೆ ಶರಣಾಗಿ

ಇರುವೊಲು ಇಹಸಂಬಂಧವ ಬಂಧಿಸಿ
ಪೊರೆಯನು ಹರಿಯುತ ಪೊರೆಯುವೆಯ?
ಒಳಗಣ್ಣಿನ ತಿಳಿನೋಟದ ತಾಳಕೆ
ಕುಣಿಯುತ ತಕಧಿಮಿ ನುಡಿಸುವೆಯ?
ನಾದವ ಹೊಮ್ಮಿಸಿ ಹರಹುವೆಯ?
ಪಾದವ ತೋರಿಸಿ ಸಲಹುವೆಯ?

ಡಿ.ನಂಜುಂಡ
01/08/20177