ಭಾನುವಾರ, ಏಪ್ರಿಲ್ 30, 2017

ಸೊಳ್ಳೆಗಳು ನಾವು

ಸೊಳ್ಳೆಗಳು ನಾವು
ಸೊಳ್ಳೆಗಳು ನಾವು
ದೇಶವನೆ ಕೊಳ್ಳೆ ಹೊಡೆವರಿಗಿಂತ
ಒಳ್ಳೆಯವರು ನಾವು

ಸೊಳ್ಳೆಗಳಿಲ್ಲದ ಊರೆಲ್ಲಿದೆಯೋ?
ಇದ್ದರದೂರಲ್ಲವೆ ಅಲ್ಲ 
ಬಚ್ಚಲ ರೊಚ್ಚೇ ಇಲ್ಲದೆ ಇದ್ದರೆ
ಸ್ನಾನವ ಮಾಡುವರಲ್ಲಿಲ್ಲ

ಕೊಳಚೆಗಳಿರುವೆಡೆ ನಮ್ಮಾವಾಸವು
ಅಲ್ಲೇ ನಮ್ಮಯ ಸಂಸಾರ
ಸ್ವಚ್ಛತೆಯಿಲ್ಲದ ಬೀದಿಗಳಿದ್ದರೆ
ಅಲ್ಲಿಹುದೆಮ್ಮಯ ಪರಿವಾರ

ರಕ್ತವ ಹೀರುವ ಜೀವಿಗಳೆಂದು
ನಮ್ಮನು ನೀವ್ ಕಡೆಗಣಿಸದಿರಿ
ಸತ್ತಂತಿಹರನು ಕಚ್ಚೆಚ್ಚರಿಸುವ
ನಮ್ಮುಪಕಾರವ ಮರೆಯದಿರಿ

ಏಳಿರಿ! ಎಚ್ಚರಗೊಳ್ಳಿರಿ! ಎಂದರೂ
ಏಳದ ಮಂದಿಯ ಹುಡುಕುವೆವು
ಜಗವೇ ನಿದ್ರೆಯ ಗೊರಕೆಯೊಳಿದ್ದರೂ
ಹಾಡುತ ಜಾಗ್ರತಗೊಳಿಸುವೆವು

ಜನಸಂಖ್ಯೆಯು ಮಿತಿಮೀರದ ಹಾಗೆ
ರೋಗಾಣುಗಳನು ಹರಡುವೆವು
ಅತಿಸಂತಾನದ ತಾನನವಳಿಸುತ
ಮಿತದಾ ಹಿತದರಿವೆರೆಯುವೆವು

ಬಾಳಿನ ಅವಧಿಯು ಅರೆದಿನವಾದರೂ
ಸಾರ್ಥಕ ಜೀವನ ನಡೆಸುವೆವು
ಸಾವಿಗೆ ಹೆದರದ ಕೆಚ್ಚೆದೆ ಕಲಿಗಳು
ರಕುತದಿ ಬರೆವೆವು ಇದ ನಾವು

ಡಿ.ನಂಜುಂಡ
30/04/2017


ಶನಿವಾರ, ಏಪ್ರಿಲ್ 29, 2017

ಕಾಯಕ

ದುಡ್ಡು ಗಳಿಸಬೇಕೋ? ಅದನು
ಗುಡ್ಡೆ ಹಾಕಬೇಕೋ?
ದುಡಿಮೆ ಮಾಡಿ ತಿಂದುಣ್ಣುವ
ತೃಪ್ತಿಯೊಂದೆ ಸಾಕೋ

ಕೆಲಸಗೈವ ವೇಳೆಯಲ್ಲಿ
ಗೊಣಗುಟ್ಟುವುದೇಕೋ?
ಹಣವೆಣಿಸುವ ಕ್ಷಣಕೆ ಮಾತ್ರ
ಮನವಟ್ಟದೊಳೇಕೋ?

ತ್ಯಾಗದ ತಳಪಾಯವಿರದ
ಭೋಗಸೌಧವೇತಕೊ?
ಕರ್ಮದ ಕೊಳೆಯಂಟದಂತೆ
ಕಾಯಕವಿರೆ ಸಾಕೊ

ಪ್ರತಿನಿಮಿಷದಿ ಸಂತೃಪ್ತಿಯ
ಪ್ರತಿಫಲಗಳು ಮಾಗಿ
ಮೊಗಮೊಗದಲಿ ಸಂತುಷ್ಟಿಯ
ಕೈಲಾಸವು ಬಾಗಿ
ಸಂತತಸುಖನದಿಯುಕ್ಕಲಿ
ಶಿವಮೊಗದೆಡೆ ಸಾಗಿ

ಡಿ.ನಂಜುಂಡ

29/04/2017

ಶನಿವಾರ, ಏಪ್ರಿಲ್ 22, 2017

ಹೇಳು ಮಾತೆ!

ಮತ್ತೇತಕೆ ವನವಾಸವು?
ಹೇಳು ಮಾತೆ! ಸೀತೆ!
ಮಾತಿನಾತ್ಮದರ್ಥವಿಂದು
ದೇಹಭಾವ ತ್ಯಜಿಸಿತೆ?

ಅಂತರಾರ್ಥಶಕ್ತಿಯಂದು
ವ್ಯೋಮಯಾನವೇರಿತೆ?
ಅಗಸನೀಗ ಕುಹಕವಾಡೆ
ಅರ್ಥಾಂತರವಾಯಿತೆ?

ಮಾತಿಗೆ ಹತ್ತರ್ಥಗಳನು
ಹೊಂದಿಸೆ ನೀನಪಹೃತೆ!
ಮೋಹಾರ್ಥಕೋಟಿಗಳನು
ತಾಪಾಗ್ನಿಯು ದಹಿಸಿತೆ?

ಮೌನಗರ್ಭದೊಳಗೆ ಮಲಗಿ
ಮಾತು ನಿದ್ದೆಗೈವುದೆ?
ಹೇಳೆ ಮಾತೆ! ರಾಮಗೀತೆ!
ಮತ್ತೆ ಅರ್ಥವಳುವುದೆ? 

ಡಿ.ನಂಜುಂಡ
22/04/2017


ಶುಕ್ರವಾರ, ಏಪ್ರಿಲ್ 21, 2017

ದರ್ಶನವ ನೀಡೈ ಜಗನ್ಮಾತೃಕೆ!

ಸುಕುಮಾರಿ ಸುರನಾರಿ ಪೂರ್ಣೇಂದುರೂಪಸಿರಿ
ಕನಕಾಂಗಿ ಜಗದೇಕಘನಸುಂದರಿ
ಅಪರೆ ಅಪ್ಸರೆ ಅಮರೆ ಅಜರೆ ಅಗಣಿತತಾರೆ
ಅರ್ಥಧರೆ ಆದ್ಯಂತಶೂನ್ಯಾಂಬರೆ

ಹೇ ತ್ರ್ಯಕ್ಷರಾಗರ್ಭತತ್ತ್ವಾರ್ಥಪೂರೆ
ಬಂಧರಾಹಿತ್ಯ ಪ್ರೇಮಾವತಾರೆ
ಪರಿಪೂರ್ಣಪದವರ್ಣಪೂರ್ಣದಿಂ ಪ್ರತಿಫಲಿತ
ಭಾವಕಲ್ಪೋಕ್ತಸಾಹಿತ್ಯಧಾರೆ

ಉಕ್ತಾಕ್ಷರಾವರ್ತನೋಚ್ಚಾರಶಕ್ತಿಧರೆ
ಲಲಿತವಾಕ್ಯಾಂಗಸೌಂದರ್ಯಭಾರೆ
ಹೇ ವಾಣಿ ಗೀರ್ವಾಣಿ ಕಲ್ಯಾಣಿ ಕಲ್ಪಮಣಿ 
ಜಿಹ್ವಾಗ್ನಿಕುಂಡದೊಳಗೆದ್ದು ಬಾರೆ 

ಉದಾತ್ತಾನುದತ್ತಾದಿ ಸ್ವರಸಂಭ್ರಮೋತ್ಸವದಿ
ಉತ್ಕಂಠಿತಾಮಂತ್ರಣೋದ್ಗಾರಕೆ
ಉತ್ಥಾನಮಾರ್ಗದೊಳಗುತ್ತುಂಗರಥವೇರಿ
ಶಬ್ದಮಣಿನೂಪುರವನಾಲಿಸಲಿಕೆ
ದರ್ಶನವ ನೀಡೈ ಜಗನ್ಮಾತೃಕೆ

ಡಿ.ನಂಜುಂಡ

21/04/2017