ಉತ್ತಿ ಎಮ್ಮಾಸೆಗಳ ಅಂಕುರದ ಒಳಗಿರ್ಪ
ಬತ್ತದಾ ಮಣ್ಣಿನೊಳ ಉತ್ಸಾಹಕ್ಕೆ ಶರಣು
ಅತ್ತಾಗ ತುತ್ತಿಡುವ ಸತ್ತಾಗ ಹೂತಿಡುವ
ನಿತ್ಯಪರಿಪೂರ್ಣತತ್ತ್ವಕ್ಕೆ ಶರಣು
ಓ ಭೂಮಿಮಾತೆ! ಸುಖಶಾಂತಿದಾತೆ!
ಅಭಯಪ್ರದಾತೆ!
ಆಕಾಶವಾಯ್ವಗ್ನಿಜಲಭೂತಸಂಶಕ್ತಿ-
ಯುಕ್ತಾತ್ಮಚೈತನ್ಯಸತ್ಯಸಂಗೀತೆ
ಭಕ್ತಿರಸಪರಮಾನ್ನನೈವೇದ್ಯಸಂಪ್ರೀತೆ
ಅಖಿಲಜಗಜೀವಕುಲಕೇಕೈಕ ಮಾತೆ
ಕಾಮಾದಿ ಷಡ್ವೈರಿ ದುಸ್ಸಂಗದಿಂದೆದ್ದ
ಮಮಕಾರಹವ್ಯಗಳನರ್ಪಿಸುವೆ ತಾಯೆ
ತಾಮಸಿಕ ಗುಣದೋಷದಾವರಣವನು ಹರಿದು
ಸಾಮರಸಗುಣಗಳಿಂದಾವರಿಸು ತಾಯೆ
ಆರೋಗ್ಯ ವೈರಾಗ್ಯ ಭವಯೋಗ್ಯ ಭಾಗ್ಯಗಳ
ಸಾರಥ್ಯದಿಂದಲೀ ರಥವು ಚಲಿಸುತಿರಲಿ
ಚರಯೋಗಸಂಸಿದ್ಧಭೋಗಸಂವೃದ್ಧಿಗಳು
ಪರಮಪದಸಂಬಂಧಸೂತ್ರದೊಳಗಿರಲಿ
ವರಭೂಮಿಮಾತೃಕೆಯ ಚರಣಗಳಲಿರಲಿ
ಡಿ.ನಂಜುಂಡ
08/10/2014
ನಮ್ಮದೇ ತಪ್ಪುಗಳ ಕಾರಣದಿ ರೌಧ್ರಾವತಾರವ ತಳೆವ ಪ್ರಕೃತಿ ಮತ್ತು ಸಹಸ್ರಾಪರಾಧಗಳ ಹೊರತು ಸಹಿಷ್ಣುವಾಗುವ ಕ್ಷಮಯಾ ಧರಿತ್ರೀ, ಇದನ್ನು ಸಮೀಕರಿಸುವ ಕವಿಯ ಕಿವಿ ಮಾತುಗಳು.
ಪ್ರತ್ಯುತ್ತರಅಳಿಸಿತುಂಬ ಮಾರ್ಮಿಕವಾದ ಭೂಪ್ರಾರ್ಥನೆ.
ಕವಿತಾ ರಚನಾ ಕೌಶಲ್ಯದಲ್ಲಿ ಮನಸೆಳೆದದ್ದು ಸುದೀರ್ಘ ಏಕ ಪದ ವಾಕ್ಯ - ಸಾಲಿನ ರಚನೆಗಳು.
ಧನ್ಯವಾಧಗಳು ಬದರಿಯವರೇ..
ಪ್ರತ್ಯುತ್ತರಅಳಿಸಿ