ಭಾನುವಾರ, ಆಗಸ್ಟ್ 4, 2013

ಸೋಂಕಿಸಿದೆ ಪ್ರೇಮಜ್ವರವ



ಕಣ್ಣ ಹುಬ್ಬಿನ ಮೇಲೆ ವರ್ಣಮಾಲೆಯನಿರಿಸಿ
ಕುಣಿಸುತಿರೆ ಪದಗಳನು ಬರೆದೆ ಕವನ.
ಮಣ್ಣ ಒಳಗಿನ ಸಾರ ಹಣ್ಣೊಳಗೆ ಬೆರೆತಾಗ
ಬಣ್ಣನೆಯ ಸುಳಿವೆನಗೆ ನಿನ್ನ ವರ್ಣ

ಕಣ್ಣ ಮಿಟುಕಿಸಿ ಒಮ್ಮೆ ಸೋಂಕಿಸಿರೆ ಪ್ರೇಮಜ್ವರ
ನನ್ನೆದೆಯು ಕಾವೇರಿ ಕೆಂಪು ಕೆಂಡ.
ಬಿಸಿಯುಸಿರ ಜ್ವಾಲೆಯಲಿ ಬೆಂದಿರುವ ಭಾವದಲಿ
ಹಸಿಯ ಕಾಮನಬಿಲ್ಲ ಸಪ್ತವರ್ಣ.

ಒಲವೊಳಗೆ ಕನಸಿಟ್ಟು ಕರಗಿಸುತ ಹದಗೊಳಿಸೆ
ಕುಲುಮೆಯಲಿ ಪುಟವಿಟ್ಟ ಕನಕರತ್ನ.
ಗಲ್ಲದಲಿ ಬೆರಳಿಟ್ಟು ದೃಷ್ಟಿಸಲು ನೀನೆನ್ನ
ಬೆಲ್ಲವೇ ಬಂದಂತೆ ಇರುವೆಯತ್ತ.

ಜನುಮ ಜನುಮದ ಪ್ರೇಮ ಅಮರಪದರಸದಂತೆ
ಅನವರತ ಹೃದಯದೊಳು ಸುರಿವ ಹನಿಯು.
ಮನಸುಮವ ಅರ್ಪಿಸಿರೆ ಒಲವ ಅಂಜಲಿಯಲ್ಲಿ
ಕಣಕಣದ ಅನುಭಾವ ನಿನ್ನ ವರವು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ