ಶುಕ್ರವಾರ, ಏಪ್ರಿಲ್ 3, 2015

ತರುದೇವತೆ

ಬೇಸಿಗೆಯ ಬೆಂಗಾಡ ಬೇಗೆಯಲಿ ಬಸವಳಿಯೆ
ನೆರಳನೀಯುತ ಬಯಲ ಒಂಟಿ ಮರವು;
ತರಗೆಲೆಯ ತಳಹಾಸ ತಂಪಿತ್ತು ಹರಸುತಿರ-
ಲೆನಗೇಕೆ ಬೇಕು ಮತ್ತೊಂದು ವರವು

ಮರದ ಹಸಿರೆಲ್ಲವೆನ್ನುಸಿರ ಜಸವಾಗಿ
ಕಣಕಣದಿ ಹೊಸ ಹುರುಪಿನರಳ ಕುಣಿಸಿ
ಉಲ್ಲಾಸದಾ ಮಂದಹಾಸವನು ತಂದಿರಿಸಿ
ಎದೆಯಗಲ ನುಡಿಯಿಂಪ ಕಂಪ ಸೂಸಿ

ಬಿಸಿಲ ಬೆಂಕಿಯ ಹೊತ್ತು ತಂಪೆರವ ತರುದೇವಿ-
ಯವತರಿಸಿ ಆನಂದಸುಧೆಯ ತರಲು
ಅದಕಿಂತ ಬೇರಾವ ದೇವತೆಯ ನಾ ಕಾಣೆ
ಮನಸುಮವನನುದಿನವು ಅಡಿಗಿರಿಸಲು.

ಡಿ.ನಂಜುಂಡ
04/04/2015


1 ಕಾಮೆಂಟ್‌: