ಬುಧವಾರ, ಸೆಪ್ಟೆಂಬರ್ 2, 2015

ಪಕ್ಷಪಾತ!?

ವಿದ್ಯುದವಲಂಬನೆಗೆ ಮಾನವನು ನಲುಗೆ
ವಿದ್ಯುದಾಲಿಂಗನದಿ ಸತ್ತಂತೆ ಕಾಗೆ
ಕಾಗೆ ಸತ್ತರೆ ಜಗಕೆ ಇನಿತಿಲ್ಲ ಕೊರತೆ
ಮನುಜ ಸತ್ತರೆ ಏಕೋ ಕಣ್ಣೀರಿನೊರತೆ

ಕಾಗೆಗಳ ಸಂಕುಲಕೆ ಶಾಂತಿಯನು ನೀಡಿ
ನರಜನ್ಮವನು ಮಾತ್ರ ಕತ್ತಲೆಗೆ ದೂಡಿ
ಪಕ್ಷಪಾತವನೆಣಿಪ ದೇವನಾರು?
ಎಲ್ಲಿಹುದು ಜಗದ ಮಲತಾಯಿಬೇರು?

ಕತ್ತಲೆಯು ಕವಿದಾಗ ಸೊಡರಿನೊಳು ಬಂದು
ಹೇಳುತಿಹನೀ ಬೆಳಕು ನಿನಗೆ ಸಾಕೆಂದು
ಮಾನವನ ನೈವೇದ್ಯದನ್ನವನು ತಿಂದು
ದೇವ ಹೀಗೇಕೆ ಮಾಡುತಿಹನಿಂದು

ಮನುಜಗಿಲ್ಲದ ಸುಖವು ಕಾಗೆಗಳಿಗೇಕೆ?
ರವಿಯ ಬೆಳಕೊಂದೇ ಮಾನವಗೆ ಸಾಕೆ?

ಡಿ.ನಂಜುಂಡ
02/09/2015


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ