ಶುಕ್ರವಾರ, ಜನವರಿ 19, 2018

ಮಂಥನ

ಅಸ್ತಿನಾಸ್ತಿಗಳೆಂಬ ದ್ವಂದ್ವಗಳನೊಡೆದೊಡೆದು
ಅಸ್ತಿತ್ವಪರಮಾಣುಕಣವೊಂದನುಳಿಸಿ
ತತ್ತ್ವಭಾವಪರಿಪೂರ್ಣವಿಸ್ತಾರದಲಿ
ನಿರಪೇಕ್ಷವಾಗುಳಿಯೆ ಸಾಪೇಕ್ಷವಳಿಸಿ

ಕಣ್ಣೆರಡು ಕಂಡದ್ದು ಕಿವಿಯೆರಡು ಕೇಳಿದ್ದು
ಮೂಗು ತಾನಾಘ್ರಾಣಿಸುದುದೆಲ್ಲವನ್ನು
ಅಸ್ತಿತ್ತ್ವದಾ ಸ್ಪರ್ಶದನುಭಾವವೆಂದರಿತು
ನಾಲಗೆಯು ಹೇಳಿದುದು ದ್ವಂದ್ವವನ್ನು

ಅದು ಸತ್ಯವಿದು ಮಿಥ್ಯವೆಂಬ ತೀರ್ಮಾನಗಳು
ಭಾವದಲ್ಲಿರುವರೆಗು ಅದು ಜ್ಞಾನವಲ್ಲ
ತೀರ್ಮಾನರಾಹಿತ್ಯ ಸ್ಥಿತಿಯ ತಲುಪಿದ ಕ್ಷಣದಿ
ಭೂತಭವ್ಯಗಳೆಂಬ ಕಾಲಗಳೆ ಇಲ್ಲ

ಭೂತಭವ್ಯಗಳಿರದೆ ಸಾಪೇಕ್ಷವೇ ಇಲ್ಲ
ಕಾಲವುರುಳದೆ ಭಾವಕಸ್ತಿತ್ವವಿಲ್ಲ
ಭಾವವಿರದಾ ಕಾಲ ತಾ ದೀರ್ಘವಾಗುಳಿದು
ತನ್ನೊಳಗೆ ಸ್ಥಿರವಾಗೆ ನಿರಪೇಕ್ಷವೆಲ್ಲ

ಯಾವುದನು ತಿಳಿದಾಗ ತಿಳಿದವನು ತಿಳುವಳಿಕೆ-
ಯಲ್ಲಿಯೇ ಸೇರಿದಂತಾಗಲದು ನಿತ್ಯ
ವರ್ತಮಾನವೇ ಜಗದಗಲ ವ್ಯಾಪಿಸಿಹ
ಮತಿಗೆ ನಿಲುಕದ ಗಹನದಸ್ತಿತ್ವತತ್ತ್ವ

ಡಿ.ನಂಜುಂಡ
19/01/2018






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ