ಮಂಗಳವಾರ, ಸೆಪ್ಟೆಂಬರ್ 6, 2016

ಮಳೆ ಸುರಿಯಲಿ

ಮಳೆ ಸುರಿಯಲಿ ನೆಲ ನೆನೆಯಲಿ ಜಲದೊರೆತೆಯು ಮೊರೆಯಲಿ
ಬೆಳೆಗಳ ತಳಿರೊಡೆಯಲಿ ತೆನೆಹಾಲ್ ತುಂಬಲಿ, ತೂಗಲಿ

ಕಾವೇರಿಯು ಮೈನೆರೆಯಲಿ ಕಾವೆಲ್ಲವ ತಣಿಸಲಿ
ಭಾವ ಝರಿಯ ಹರಹಿನಲ್ಲಿ ನಾವು ನಮ್ಮ ಮರೆಯಲಿ

ತುಂಗೆಯ ಇಕ್ಕೆಲೆಗಳಲ್ಲಿ ಹೊಂಗೆ ಬೀಜವುದುರಲಿ
ಸಿಂಗಾರದ ಸಿಕ್ಕೊಡೆಯಲಿ ತೆಂಗಿನ ಗರಿಗೆದರಲಿ

ಅಂಬುತೀರ್ಥದಿಂದ ಜಗದ ಅಂಬೆಯು ಅವತರಿಸಲಿ
ನಂಬಿದವರಿಗಿಂಬನೀವ ಹೊಂಬೆಳಗಣ್ ತೆರೆಯಲಿ

ಮಲೆನಾಡಿನ ಮಳೆಹಾಡಿಗೆ ಕಲೆಗಳ ಸೆಲೆಯೊಡೆಯಲಿ 
ಜಲದೊಲವಿಗೆ ಮೊಗಮೊಗಗಳು ಮೊರಗಳ ಹಾಗಾಗಲಿ

ಡಿ.ನಂಜುಂಡ
06/07/2016





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ