ಸೋಮವಾರ, ಡಿಸೆಂಬರ್ 23, 2013

ಭಾವಗಳ ಸಿರಿಯಿರಲು ಬಡತನದ ಮಾತೇಕೆ?



ಭಾವಗಳ ಸಿರಿಯಿರಲು ಬಡತನದ ಮಾತೇಕೆ?
ಕಾವ್ಯಶರಧಿಯ ತೆರೆಗೆ ಮೌನವಿನ್ನೇಕೆ?
ನೋವು ನಲಿವಿನ ರಸವು ಚಿಮ್ಮುತಿರೆ ಸಮತೆಯಲಿ
ಕಾವುದೇತಕೆ ನಲ್ಲೆ!; ಹೃದಯಮಂಥನಕೆ

ಮಣ್ಣ ಕುಡಿಕೆಯ ಒಳಗೆ ಬೆಂದಿರುವ ಕಾಳುಗಳು
ಪ್ರಾಣಾಗ್ನಿಜ್ವಾಲೆಗಳ ಸಂತೈಸುತಿಹುದು
ಕಣ್ಣ ಕುಕ್ಕುವ ಹೊನ್ನು ಕಿಡಿಯನುಲ್ಬಣಗೊಳಿಸಿ
ಕ್ಷಣದಿ ಕರಗಿಸಿ ಸುಖವ ಬದುಕ ಸುಡಬಹುದು

ಗುಣಗಳನು ಸಂಕಲಿಸಿ ಮನದೊಳಗೆ ಸಂಸ್ಕರಿಸಿ
ಮಾನಾಪಮಾನಗಳ ಸಮತೂಕಗೊಳಿಸಿ
ಅನ್ನರಸದಾನಂದವೊಲವಾಗಿ ಒಸರಿಸಲಿ    
ಜನುಮಜನುಮದ ಋಣವ ಬಂಧದಲಿ ಇರಿಸಿ

ಬಾಳಿನೊಡತಿಯೆ! ನಿನ್ನ, ಕರೆಯುತಲಿ "ನನ ಚಿನ್ನ!"
ಓಲೆಯಲಿ ಮುತ್ತೊಂದ ಇರಿಸುವೆನು ಬೇಗ
ಚೆಲುವು ಮೂಡಲು ಮೊಗದಿ ನಗೆಹೂವ ಕುಡಿಯುವೆನು
ಬಲ್ಲಿದರು ಯಾರಿಲ್ಲಿ? ಹೇಳು ನೀ ಆಗ

ಡಿ.ನಂಜುಂಡ
24/12/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ