ಶನಿವಾರ, ಡಿಸೆಂಬರ್ 7, 2013

ಅಕ್ಷಿಯೊಳಗಣ ಸಾಕ್ಷಿಯಂಕುರ



ಇರುಳು ಕರಗುತಲೆದ್ದು ಕಸಗುಡಿಸಿ ಹಾಲ್ಕರೆದು
ಹೊರಟು ನಿಂತಳು ಬಡವಿ ಬನದಕಡೆಗೆ
ಬರಿಗಾಲ ನಡಿಗೆಯಲಿ ಹೊಕ್ಕಳಾ ಕಾಡೊಳಗೆ
ತರಗೆಲೆಯ ಗುಡಿಸಿ ತಾ ಹೊತ್ತುತರಲು

ಬಡತನದ ಬೇಗುದಿಗೆ ಒಡಲೆಲ್ಲ ಹದವಾಗಿ 
ನಡುವು ಬಳುಕಿದೆ ಬಾಗಿ ಮಣ್ಣಿನೆಡೆಗೆ
ಬಿಡದೆ ಬೆವರನು ಸುರಿಸಿ ದುಡಿಯುತಿರೆ ಅನುದಿನವು
ಗಡಿಗೆಯೊಳು ಬೇಯುತಿದೆ ಕಾಳುಕಡಿಯು

ಅಕ್ಷರದ ಸೋಂಕಿಲ್ಲ ಹೆಸರಿನಾ ಹಮ್ಮಿಲ್ಲ
ಕುಕ್ಷಿಯೊಳಗೆಚ್ಚರದ ಕಿಡಿಯು ಇರಲು
ಪಕ್ಷಿಯುದರದಿ ಬೆಂದ ಬೀಜಗಳ ತೆರದಲ್ಲಿ
ಅಕ್ಷಿಯೊಳಗಣ ಸಾಕ್ಷಿಯಂಕುರಿಪುದು

ಹುಟ್ಟಿನಿಂದಲೆ ಬಂದ ಕಷ್ಟಗಳ ಜ್ವಾಲೆಯದು
ಚಟ್ಟದೊಳು ಹೊಳೆಯುವುದು ಸುಖವನಿಟ್ಟು
ಇಷ್ಟಗಳ ಬೆನ್ನಟ್ಟಿ ಪಡೆದ ಮಮಕಾರಗಳು
ಸುಟ್ಟು ಬಿಡುವುವು ಸುಖವ ಕಟ್ಟಕಡೆಗೆ

ಇರುಳ ಕರಗಿಸಿ ರವಿಯು ಹೆರಲು ಹಗಲನು ನಿತ್ಯ
ಉರಿವ ಬೆಂಕಿಯು ಬೇಕು ಉದರದೊಳಗೆ
ಉರದೊಳಗೆ ತುಂಬಿರಲು ಇಲ್ಲಗಳ ಕಿಚ್ಚುಗಳು
ಇರುವುದೆಲ್ಲವು ಬೆಳಕು ಬಡವರೊಳಗೆ

ಡಿ.ನಂಜುಂಡ
7/12/2013


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ