ಮಂಗಳವಾರ, ಜನವರಿ 27, 2015

ಧ್ವನಿ

ಯಾವುದೋ ಕಲ್ಪನೆಗೆ ಕವಿಮನವು ಸಂಚಲಿಸಿ
ಉಲ್ಲಾಸಭಾವದಲಿ ಉಯ್ಯಾಲೆಯಾಡಿ
ವ್ಯೋಮಾದಿ ಮಧ್ಯಾಂತರಾಹಿತ್ಯ ಪರಿಪೂರ್ಣ-
ಪದಬಂಧಸಾಹಿತ್ಯದಾನಂದವೂಡಿ

ಅದ್ವೈತ ವಾಗರ್ಥಬೀಜಗಳನುಪಚರಿಸಿ
ಚಿತ್ತಭೂಮಿಯನಗೆದು ಅಲ್ಲಲ್ಲಿ ಬಿತ್ತಿ
ಸತ್ಸಂಗ ಸಾವಯವ ಸಾರಗಳನೈತಂದು
ನೇತ್ರಾದಿ ಕರಣಗಳ ಸೊಲ್ಲುಗಳನೊತ್ತಿ

ಅಸ್ತಿ ನಾಸ್ತಿಗಳೆಂಬ ಕಳೆಗಳೆಲ್ಲವ ಕಿತ್ತು
ಸದಸದ್ವಿವೇಕವಿಜ್ಞಾನತಂತ್ರದಲಿ
ಆಂತರ್ಯದಾಕಾಶವಿಸ್ತಾರಚೈತನ್ಯ-
ಕಣಸ್ಪರ್ಶದಾ ಝಣದ ಕುಣಿದಾಟದಲ್ಲಿ

ಕಾಮನಾ ಬಿಲ್ಲಂತೆ ವರ್ಣವೆಲ್ಲವು ಬಾಗಿ
ಸೃಷ್ಟಿಸೌಂದರ್ಯಕ್ಕೆ ತಾಗಿ ಧ್ವನಿಯಾಗಿ
ರವಿಯ ಸಾರಥಿಯಾಗಿ ಅರುಣ ತಾ ಬರುವಾಗ
ಬಾನಾಡಿಗಳ ಕೊರಳ ಸ್ವರಮೇಳವಾಗಿ
ತಾನನವೇ ತಾನಾಗಿ ಬಂತು ಹಾಡಾಗಿ.

ಡಿ.ನಂಜುಂಡ
27/01/2015



1 ಕಾಮೆಂಟ್‌:

  1. ತಮ್ಮ ಧ್ವನಿಯಾದ ಕವನವೂ ನನಗೆ 'ಪದಬಂಧಸಾಹಿತ್ಯದಾನಂದವೂಡಿ' ಆನಂದ ಕೊಟ್ಟಿತು.
    ಲಾಲಿತ್ಯಪೂರ್ಣ ರಚನೆ. :-)

    ಪ್ರತ್ಯುತ್ತರಅಳಿಸಿ