ಬುಧವಾರ, ಮೇ 25, 2016

ಧರ್ಮ-ಕರ್ಮ

ಸುಡುಗಾಡ ಕಟ್ಟಿಗೆಯು ಸುಟ್ಟೀತೆ ಕರ್ಮಗಳ
ಪ್ರಾರಬ್ಧಕರ್ಮ ತಾ ಬಿಟ್ಟೀತೆ ಸುಡದೆ
ಜ್ಞಾನಾಗ್ನಿಕುಂಡದೊಳಗರ್ಪಿಸಿದ ಪ್ರತಿಯೊಂದೂ
ಧರ್ಮರೂಪದಿ ಬಂದು ಪೊರೆದೀತು ಬಿಡದೆ

ಸ್ವಾರ್ಥದಿಂ ಯೋಚಿಸಿದ ವಸ್ತುವಿಷಯಗಳಲ್ಲಿ
ಪ್ರತಿಫಲಗಳೊಡೆತನವು ನಮ್ಮದಾಗಿರಲು
ಒಳಿತು ಕೆಡುಕುಗಳೆಂಬ ತೀರ್ಮಾನವಲ್ಲಿಹುದು
ದ್ವಂದ್ವವೇ ನಮ್ಮ ಭಾವದಲ್ಲಿರಲು

ದ್ವಂದ್ವತೀರ್ಮಾನಗಳ ತೀವ್ರತೆಯನನುಸರಿಸಿ
ದ್ವಂದ್ವದಲೆಗಳು ಮನದ ಆಳಕಿಳಿಯುವುವು
ವರ್ತುಲಾಕಾರದಲಿ ಸುತ್ತುತಲಿ ಮೇಲೆದ್ದು
ಮತ್ತೆ ಚಿತ್ತವೃತ್ತಿಯ ರೂಪ ತಳೆಯುವುವು

ನಿಷ್ಕಾಮಚಿಂತನೆಯ ವಸ್ತುವಿಷಯಗಳಲ್ಲಿ
ದ್ವಂದ್ವತೀರ್ಮಾನಗಳ ಒತ್ತಡಗಳಿಲ್ಲ 
ಇದು ಒಳಿತು, ಅದು ಕೆಡುಕು ಎಂಬ ಭಾವಗಳಿಲ್ಲ
ಕರ್ಮಫಲದರ್ಪಣೆಗೆ ಕರಗಲಿಹುದೆಲ್ಲ

ನಮ್ಮದಾವುದೂ ಇಲ್ಲವೆಂಬ ಜ್ಞಾನವೆ ಧರ್ಮ
ನಮ್ಮದೆಂಬುದು ನಮ್ಮ ಬಂಧಿಸುವ ಕರ್ಮ
ಸ್ವಾರ್ಥವೇ ಬಂಧ; ನಿಸ್ಸ್ವಾರ್ಥವೇ ಮುಕ್ತಿಯದು
ಅನ್ಯವೆಲ್ಲವು ಮಿಥ್ಯವೆಂಬುದರ ಮರ್ಮ

ಡಿ.ನಂಜುಂಡ
25/05/2016


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ