ಭಾನುವಾರ, ಡಿಸೆಂಬರ್ 14, 2014

ಯಾರವನು!?

ಆವನೋ ಬರೆಯುವನು ಪರಿಪರಿಯ ಕವಿತೆಗಳ
ಭಾವಕ್ಕೆ ತಕ್ಕ ಪದವಿನ್ಯಾಸವಿರಿಸಿ
ಆವನೋ ಕುಣಿಯುವನು ಹೃದಯನವರಂಗದಲಿ
ಜೀವತಾಳವ ತಕ್ಕ ಮೇಳದೊಳಗಿರಿಸಿ

ಕನಸುಗಳ ಲೋಕದಲಿ ಅನುದಿನವು ಅಭಿನಯಿಸಿ
ಮನದಾಳದತಿಯಾಸೆಗಳನೆಲ್ಲ ತಣಿಸಿ
ಬಾನಗಲ ಬಿತ್ತರದ ತಾನನವನೈತಂದು
ದನಿಯಾಳದಲ್ಲಿರಿಸಿ ಕಣಕಣದಿ ಗುಣಿಸಿ

ಕಾಗೆ ಕೋಗಿಲೆ ಗೂಬೆ ಗುಬ್ಬಚ್ಚಿ ಗೂಡುಗಳ
ರಾಗರಂಜಿತ ಕೂಗುಗಳನು ಸಂಕಲಿಸಿ 
ಬಗೆಬಗೆಯ ಮಾತುಗಳ ಮಾಧುರ್ಯದರಳಾಗಿ
ಮೊಗವೇರಿ ಬರುತಿಹನು ನಗೆಹೂವ ಮುಡಿಸಿ

ಡಿ.ನಂಜುಂಡ
14/12/2014


2 ಕಾಮೆಂಟ್‌ಗಳು: