ಸೋಮವಾರ, ಫೆಬ್ರವರಿ 18, 2013

ಗೋಪುರ ಕಟ್ಟಿ ಗುಡಿಸಲ ಕೆಡವುವರು!




ಗೋಪುರ ಕಟ್ಟಿ ಗುಡಿಸಲ ಕೆಡವುವರು!
************************
ಇಲ್ಲದ ದೇವರ ಕಲ್ಲಿನ ಪೂಜೆಗೆ
ಬಗೆಬಗೆ ರಸಗಳ ಅಡುಗೆಯಿದೆ.
ಗುಡಿಸಲ ಜೀವಿಯ ತೀರದ ಹಸಿವಿಗೆ
ನಿನ್ನೆಯ ಹಳಸಿದ ತಂಗಳಿದೆ.

ಕಲ್ಲಿನ ಪೂಜೆಯ ಸ್ನಾನದ ನೀರಿಗೆ
ಪರಿಮಳ ದ್ರವ್ಯವ ಬೆರೆಸುವರು.
ಬಡವನ ದೇಹವ ಶುಚಿಯನು ಮಾಡಲು
ನೀರಿಗೆ ಸಗಣಿಯ ಬೆರೆಸುವರು.

ದೇವರ ಹುಂಡಿಗೆ ಹಾಕಿದ ಧನವದು
ದಕ್ಷಿಣೆ ಹೆಸರನು ಗಳಿಸುವುದು.
ಬಡವನ ಮಡಿಲಿಗೆ ಎಸೆದಾ ಕಾಸದು
ಭಿಕ್ಷೆಯ ರೂಪವ ಪಡೆಯುವುದು.

ದೇವರ ಬೆಳಗಲು ಬೆಳ್ಳಿಯ ಆರತಿ,
ತುಪ್ಪದಿ ಬತ್ತಿಯ ಹೊಸೆಯುವರು.
ಗುಡಿಸಲ ಕತ್ತಲೆ ಕಳೆಯುವ ಎಣ್ಣೆಗೆ
ಪಡಿತರ ಚೀಟಿಯ ಕೇಳುವರು.

ಕಲ್ಲಿನ ದೇವಗೆ ಪೀತಾಂಬರವಿದೆ,
ಚಿನ್ನದ ಮಕುಟವು ಹೊಳೆಯುತಿದೆ.
ಬಡವನ ದೇಹದ ಮಾನವ ಮುಚ್ಚಲು
ಹರಕಲು ಬಟ್ಟೆಗು ಕೊರತೆಯಿದೆ.

ಬಡವನ ಆಶ್ರಯ ಅಕ್ರಮವೆನ್ನುತ
ಕೂಡಲೆ ಗುಡಿಸಲ ಕೆಡವುವರು.
ಬಡವನ  ಶ್ರಮದಾ ಬೆವರಿನ ಹಣದಲಿ
ದೇವಗೆ ಗೋಪುರ ಕಟ್ಟುವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ