ಶನಿವಾರ, ನವೆಂಬರ್ 16, 2013

ಕವಿಯುಲಿಗೆ ಕಾವಿಟ್ಟ ದಿವ್ಯಪಕ್ಷಿ



ಕರಿಯ ಸುಂದರ ಕಾಗೆ! ಯಾರಿಲ್ಲ ನಿನ ಹಾಗೆ
ಗುರುವಂತೆ ಅನುದಿನವು ಅರಿವನೆರೆವೆ.
ಮರಮರವ ಸಿಂಗರಿಪ ಪರಮಮಿತ್ರರ ಕೂಡಿ
ಹಾರುತಲಿ ಆರವದಿ ಬೆಳಕ ಕರೆವೆ.

ಆ ರವಿಯು ಕರಗಿಸಿದ ಪರಿತ್ಯಕ್ತ ವರ್ಣವನು
ಕರುಣೆಯಿಂದಲಿ ಹೀರಿ ನೀ ಧರಿಸುವೆ.
ಮರಣ ಹೊಂದಿದ ದೇಹ ನಾರುತಿರೆ ದಾರಿಯಲಿ
ಕರೆದು ಕುಲಬಾಂಧವರ ಸಂಸ್ಕರಿಸುವೆ.

ಗುಡಿಯ ಶಿಖರವೆ ಇರಲಿ ಗುಡಿಸಿಲಿನ ಸೂರಿರಲಿ
ಒಡಲೊಳಗೆ ಎರಡೆರಡು ಎಣಿಕೆಯಿಲ್ಲ;
ಅಡಿಯಿಡುತ ಎಲ್ಲೆಲ್ಲೂ ನೋಡಿ ಸಮದೃಷ್ಟಿಯಲಿ
ಬಡವ ಬಲ್ಲಿದರೆಂಬ ಭೇದ ತೊರೆವೆ.

ಕವಿಯುಲಿಗೆ ಕಾವಿಟ್ಟ ದಿವ್ಯಪಕ್ಷಿಯು ನೀನು
ಭವದೊಳಗೆ ನಿನಗಿಂತ ಭವ್ಯರಿಲ್ಲ.
ಸಾವನಪ್ಪಿದ ಜನರು ಭಾವರೂಪವ ತಳೆದು
ಅವತರಿಸಿ ನಿನ್ನೊಳಗೆ ನಿಲುವರೆಲ್ಲ!

ಡಿ.ನಂಜುಂಡ
16/11/13

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ