ಶನಿವಾರ, ನವೆಂಬರ್ 2, 2013

ನಾನೆಂಬ ನಂಟಿನಲಿ ಅಂಟದಿರು ಎಲೆ ಮನವೆ!



ನಾನೆಂಬ ಭಾರವನು ಕೆಳಗಿಳಿಸು ಎಲೆ ಮನವೆ!
ಸಂತತವು ಅರಳುತಲಿ ಹಗುರವಾಗು.
ಎದೆಯೊಳಗ ಸುರಿಯುತಿಹ ಭಾವಗಳ ಧಾರೆಯನು
ಬಯಲ ಹರಹಲಿ ಇರಿಸಿ ಲೀನವಾಗು.

ತಂದಿಲ್ಲ ಮಕುಟವನು ಬರುವಾಗ ಈ ಜಗಕೆ
ಬಿಡುವಾಗ ನನದೆಂಬ ಚಿಂತೆಯೇಕೆ?
ಹಣ್ಣುಗಳ ಕಳಚುತಿಹ ಮರದಂತೆ ನೀನಾಗು
ಫಲವ ಬಯಸುವ ಕರ್ಮಬಂಧವೇಕೆ?

ಹಲಸಿನಾ ಹಣ್ಣಿನಲಿ ಅಂಟಿರುವ ನೊಣದಂತೆ
ಒದ್ದಾಟ ನಿನಗೇಕೆ ನಂಟಿನೊಳಗೆ?
ತಂದಿದ್ದು ಕಳೆದಿಲ್ಲ ಕಳೆದದ್ದು ನಿನದಲ್ಲ
ಸಿಲುಕದಿರು ಆಸೆಗಳ ಗಂಟಿನೊಳಗೆ.

ಚರದಿರವ ನೀ ಮರೆತು ಸ್ಥಿರವಾಗಿ ಹರಿಯುತಲಿ
ಒಂದಾಗು ಜಗದೊಲವ ಬಯಲಿನೊಳಗೆ.
ಕಡಲಿನೊಡಲನು ಸೇರಿ ಹೆಸರನ್ನು ತಾ ಕಳೆದ
ಹೊನಲಂತೆ ಬೆರೆತುಬಿಡು ಅರಿವಿನೊಳಗೆ.

ಡಿ.ನಂಜುಂಡ
03/11/2013



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ