ಗುರುವಾರ, ಅಕ್ಟೋಬರ್ 31, 2013

ಹೊಳೆಯಲಿ ಜ್ಞಾನವು ದೀಪಾವಳಿಯಲಿ



ದೀಪವು ಬೆಳಗಲಿ ಹೃದಯದ ಸೊಡರಲಿ
ಪಾಪದ ಕತ್ತಲೆಯಳಿಸುತಲಿ.
ರೂಪಾಂತರಸಂಚಿತವಿಧವಿಧಕರ್ಮ-
ವಿಪಾಕದ ಕೊಳೆಯ ತೊಳೆಯುತಲಿ.

ಸತ್ಯದ ಬತ್ತಿಯ ಹೊಸೆಯುತ ಅನುದಿನ
ಪ್ರೀತಿಯ ಎಣ್ಣೆಯನೆರೆಯುತಲಿ.
ಹೊತ್ತಿಸಿ ಶ್ರದ್ಧಾಭಕ್ತಿಯ ಕಿಡಿಯಲಿ
ತತ್ತ್ವಜ್ಯೋತಿಯ ಬೆಳಗುತಲಿ.

ಆತ್ಮಾರಾಮಗೆ ಆರತಿಯೆತ್ತುತ
ನತಮನಭಾವದಿ ಭಜಿಸುತಲಿ
ಸ್ವಾತ್ಮಾನಂದದಿ ನಿತ್ಯವು ನೆಲೆಸಲಿ
ಸತತವು ಸೃಷ್ಟಿಯ ಸ್ತುತಿಸುತಲಿ.

ಬೆಳಕನು ಚೆಲ್ಲುವ ಹಾರ್ದಿಕ ಹಣತೆಯು
ಸಾಲಲಿ ನಿಲ್ಲಲಿ ಸಮತೆಯಲಿ.
ಹೊಳೆಯಲಿ ಜ್ಞಾನವು ದೀಪಾವಳಿಯಲಿ
ಬಾಳಿನ ಪಥವನು ತೋರಿಸಲಿ.

ಡಿ.ನಂಜುಂಡ
31/10/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ