ಬುಧವಾರ, ಅಕ್ಟೋಬರ್ 30, 2013

ಕನ್ನಡಾಂಬೆಯು ಎದ್ದು ನಾಲಗೆಗೆ ಬರಲಿ



ಆನನದಿ ಕುಣಿದಾಡು ಮೌನಘನಚೇತನವೆ!
ಪ್ರಾಣದೊಳು ಪದವಿರಿಸಿ ಮನವ ಸಂಸ್ಕರಿಸಿ.
ಅಣುರೇಣುತೃಣಕಾಷ್ಠವನುರಣಿಸಿ ಬಾ ಎದೆಗೆ
ಝಣಝಣಿಪ ಓಂಕಾರಬೀಜವಂಕುರಿಸಿ.

ಧ್ಯಾನಾಗ್ನಿಕುಂಡದಲಿ ಜ್ಞಾನಾಗ್ನಿ ಪ್ರಜ್ವಲಿಸಿ
ಅನವದ್ಯ ಭಾವಗಳು ಹವಿಯಾಗಿ ಸುಡಲಿ.
ಮೌನಭಾಂಡದ ಒಳಗೆ ಚೆನ್ನುಡಿಯ ರಸಪಿಡಿದು
ಕನ್ನಡಾಂಬೆಯು ಎದ್ದು ನಾಲಗೆಗೆ ಬರಲಿ.

ಹೃದಯ ಕಮಲದ ಒಳಗೆ ಮಧುರಹನಿಗಳು ತುಂಬಿ
ಪದಗರ್ಭದೊಳಹೊಕ್ಕು ಫಲವಾಗಿ ಬರಲಿ.
ಮೊದಲ ನುಡಿಗಳ ತೊದಲು ಮೃದುಲತದ್ಭವವಾಗಿ
ವದನವರಳಿಸಿ ಮುದದಿ ಹೊರಹೊಮ್ಮುತಿರಲಿ.

ಡಿ.ನಂಜುಂಡ
30/10/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ