ಬುಧವಾರ, ಅಕ್ಟೋಬರ್ 23, 2013

ಸವತಿಮತ್ಸರ




ವನಶಿವೆಯು ತಬ್ಬಿಹಳು ತನ್ನಿನಿಯ ಗಿರಿಶಿವನ
ಹನಿಕರಿಪ ಗಂಗೆಯನು ದಬ್ಬಿ ದಬ್ಬಿ.
ಕಣಿವೆಯಾಳಕೆ ಬಿದ್ದ  ಹೊನಲ ರಾಣಿಯು ಎದ್ದು
ಮೌನಶರಧಿಯ ಕಡೆಗೆ ಓಡುತಿಹಳು.

ಕಡಲ ಒಡೆಯನ ಕೂಡಿ ಒಡಲ ಕಿಡಿಯನು ಕಕ್ಕಿ
ಮೋಡದಲಿ ತಾ ಬೆರೆತು ಗುಡುಗಿ ನಿಂದು.
ಪಡುವಣದ ಬಾನಿನಲಿ ಸಿಡುಕುತಲಿ ಕಪ್ಪೇರಿ
ಬಡಬಡನೆ ಸುರಿಮಳೆಯನುಗುಳುತಿಹಳು.

ಬಿರುಗಾಳಿಯೊಡಗೂಡಿ ತರುಬಾಹುಗಳ ಮುರಿದು
ಎರಚಿಹಳು ಬಿರುನೀರ ಸವತಿಯೆಡೆಗೆ.
ಬೇರುಗಳು ಅಲುಗುತಿರೆ ಕರವೆತ್ತಿ ಶಂಕರಿಯು
ಶರಣು ತಾ ಶರಣೆಂದು ಕೂಗುತಿಹಳು.

ದೀನತೆಯ ದನಿ ಕೇಳಿ ಕರ ಪಿಡಿದು ಹನಿಯಿರಿಸಿ
ಹರಸಿದಳು ಪ್ರೀತಿಯಲಿ ಬನಸವತಿಯ.
ಪರಶಿವನ ನೀ ಬಳಸು ಗಿರಿಶಿರದಿ ನಾನಿರುವೆ
ಮರೆಯೋಣ ಮತ್ಸರವ ಎಂದಳವಳು.

ಶಿವೆಗಂಗೆಯರ ನಡುವೆ ಸವತಿಯಂತರವಳಿಯೆ
ಬುವಿಯೆಲ್ಲ ತಂಪಾಗಿ ನಗುತಲಿಹುದು.
ಅವಳಿರದೆ ಇವಳಿಲ್ಲ ಇವಳಿರದೆ ಅವಳಿಲ್ಲ
ಶಿವನೊಡನೆ ಇಬ್ಬರೂ ಬಾಳುತಿಹರು.

ಡಿ.ನಂಜುಂಡ
23/10/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ