ಸೋಮವಾರ, ಅಕ್ಟೋಬರ್ 21, 2013

ಹೃದ್ಯತಾಳಕೆ ಕುಣಿವ ಪದ್ಯವೇತಕೆ ಬೇಕು?



ಹತ್ತು ಹೊತ್ತಿಗೆಗಳನು ಚಿತ್ತದಲಿ ಛಾಪಿಸುತ
ಹೊತ್ತು ಕಳೆಯುವೆಯೇಕೆ ಹೇಳು ಮನವೆ?
ಉತ್ತದಿರೆ ಹೊಲಗಳನು ಬಿತ್ತದಿರೆ ಕಾಳುಗಳ
ಹೊತ್ತು ಹೊತ್ತಿಗೆ ಕೂಳು ದೊರೆವುದೇನು?

ಬುದ್ಧಿಯನು ಮಸೆಯುತಲಿ ಬುದ್ಧನಾದೆನು ಎನುತ
ವಿದ್ಯೆಯನು ಬೋಧಿಸುವೆ ಗುದ್ದಿ ಗುದ್ದಿ.
ಹೃದ್ಯತಾಳಕೆ ಕುಣಿವ ಪದ್ಯವೇತಕೆ ಬೇಕು?
ಸಿದ್ಧಗೊಳಿಸಲು ಮುದ್ದೆಯನ್ನಸಾರ.

ಬಾನಿನೊಳು ತೂರಿದೊಡೆ ಮನೋವಿಮಾನದೊಳು
ಕಾಣಲಾರದು ಅಲ್ಲಿ ದೇವಕಣವು.
ಬೆನ್ನ ಬಗ್ಗಿಸಿ ದುಡಿಯೆ ಕಣಕಣದಿ ದೈವತ್ವ-
ದನುರಣಿಪ ಸತ್ಯವನು ನೋಡು ನಿತ್ಯ. 

ಡಿ. ನಂಜುಂಡ
21/10/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ