ಶುಕ್ರವಾರ, ಅಕ್ಟೋಬರ್ 18, 2013

ಕನ್ನಡಜೇನನು ಸವಿಯಲು ಬನ್ನಿರಿ



ಕನ್ನಡಹೂವ್ಗಳ ಜೇನನು ಸವಿಯಲು
ಬನ್ನಿರಿ ಹಾರುತ ದುಂಬಿಗಳೆ!
ಬಣ್ಣಬಣ್ಣಗಳ ನವಸುಮವರಳಿರೆ
ಕಣ್ಮನ ತಣಿಸುವ ತೋಟದಲಿ.

ಸ್ವರವ್ಯಂಜನಮಧುರಸಭುಂಜಿಸಿ
ಹರುಷದಿ ಕುಣಿಯಿರಿ ಬಂಧುಗಳೆ!
ತೆರೆಮರೆಸೊಬಗಿನ ರಮ್ಯಕುಸುಮಗಳ
ಪರಾಗಕೆ ಬನ್ನಿ ಝೇಂಕರಿಸಿ.

ಪಂಪರನ್ನರಾ ಪೆಂಪನು ಮೆಲ್ಲುತ
ಇಂಪಲಿ ಶುಕಗಳು ಉಲಿಯುತಿರೆ.
ಕಂಪನು ಬೀರುವ ಆ ಕಾನನದಲಿ
ಝೋಂಪನು ತರಿಸುವ ರಸವರಸಿ.

ಕೆರೆತೊರೆನದಿಝರಿಕರೆಗಳನಾಲಿಸಿ   
ಗಿರಿತಲವನದಲಿ ಅಡಿಯಿರಿಸಿ.
ಸರಸ್ವತಿರಚಿತ ಕವಿಯುದ್ಯಾನದಿ
ವಿರಮಿಸಿ ಮಧುವನು ಸ್ವೀಕರಿಸಿ.

ಕನ್ನಡನಾಡಿಗೆ ಪ್ರಕೃತಿಯೆ ಪ್ರತಿಮೆಯು
ಜನಗಣಮನಸುಮಮಕರಂದ.
ಹನಿಸಂಗ್ರಹದಾ ಮಧುಕರವೃತ್ತಿಗೆ
ಕನ್ನಡಕಾವ್ಯದ ಸಂಬಂಧ.

ಡಿ.ನಂಜುಂಡ
18/10/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ