ಶನಿವಾರ, ಜುಲೈ 29, 2017

ಗುದ್ದ ನೀಡು ಕೃಷ್ಣ

ಬುದ್ಧನಾದೆನು ಎಂದು ಎದ್ದೆದ್ದು ಕುಣಿಯುತಿರೆ
ಬುದ್ಧಿಗೊಂದೆರಡೊದ್ದು ಗುದ್ದ ನೀಡು |ಕೃಷ್ಣ!
ಸದ್ದಡಗಿ ಬಿದ್ದೊಡನೆ ಮುದ್ದು ಮಾಡು 

ವೇದಶಾಸ್ತ್ರೋಪನಿಷದಾದಿಗಳನೋದೋದಿ
ಪಾದೋನಪರಮಾಣುಮಾತ್ರವಂ ತಿಳಿದು
ಮಾಧವನ ಮಹಿಮಾವಿಶೇಷಗಳ ಚರ್ಚಿಸುತ
ನಾದಮೂಲಾಧಾರಮಾರ್ದನಿಯ ಮರೆತು

ಬುದ್ಧನಾದೆನು ಎಂದು ಎದ್ದೆದ್ದು ಕುಣಿಯುತಿರೆ
ಬುದ್ಧಿಗೊಂದೆರಡೊದ್ದು ಗುದ್ದ ನೀಡು |ಕೃಷ್ಣ!
ಸದ್ದಡಗಿ ಬಿದ್ದೊಡನೆ ಮುದ್ದು ಮಾಡು 

ಕದ್ದುಬಿಡು, ಮತಿಯು ಮಥಿಸಿದ ಬೆಣ್ಣೆಮುದ್ದೆಗಳ
ನಿದ್ದೆಯೊಳಗೆಳೆದು ಹೃದಯದೊಳಗಡಗಿಸಿಡು
ಎದ್ದೊಡನೆ ಮತ್ತವನು ಮತಿಗೆ ಕೊಂಡೊಯ್ದು
ಪದ್ಯಪೂರಣಗೊಳಿಸಿ ಕ್ಷಣದಿ ಮೆದ್ದುಬಿಡು

ಬುದ್ಧನಾದೆನು ಎಂದು ಎದ್ದೆದ್ದು ಕುಣಿಯುತಿರೆ
ಬುದ್ಧಿಗೊಂದೆರಡೊದ್ದು ಗುದ್ದ ನೀಡು |ಕೃಷ್ಣ!
ಸದ್ದಡಗಿ ಬಿದ್ದೊಡನೆ ಮುದ್ದು ಮಾಡು 

ಭಾವಪರಿಪೂರ್ಣತೆಗೆ ಯಾವ ವರ್ಣಗಳಿವೆಯೋ
ಸಾವಿರದ ಪದದೊಳಗೆ ಎಲ್ಲವನು ತುಂಬಿ
ಜೀವಭಾವದ ರಾಗದಮೃತಧಾರಾರಾಧೆ
ಸಾವಿರದೆ ತಾನುಳಿಯೆ, ನಿನ್ನ ನಂಬಿ
ನೋವಂತೆ ಹಾಡಿದುದು ಶಕುತಿದುಂಬಿ

ಬುದ್ಧನಾದೆನು ಎಂದು ಎದ್ದೆದ್ದು ಕುಣಿಯುತಿರೆ
ಬುದ್ಧಿಗೊಂದೆರಡೊದ್ದು ಗುದ್ದ ನೀಡು |ಕೃಷ್ಣ!
ಸದ್ದಡಗಿ ಬಿದ್ದೊಡನೆ ಮುದ್ದು ಮಾಡು 

ಡಿ.ನಂಜುಂಡ

29/07/2017

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ