ಗುರುವಾರ, ಜುಲೈ 27, 2017

ಪಂಚಾಮೃತ

ಮಧುಪಾತ್ರೆಯೊಲು ಪಂಚವಿಷಯಾತ್ಮಕಾಯ
ಹದವಾಗಿ ತುಂಬಿರಲು ಗೀತಾರ್ಥಪೇಯ

ದೃಷ್ಟಿ ತಾ ಸೃಷ್ಟಿಸೌಂದರ್ಯವಂ ಸೆಳೆದು
ಅಷ್ಟದಲದಲಿ ಕುಣಿವ ಕೃಷ್ಣನನು ನೆನೆಯೆ
ಇಷ್ಟಕಷ್ಟÀಸುಮವೃಷ್ಟಿಯಿಂದರ್ಚಿಸುತ
ಇಷ್ಟಿಪರಿಪೂರ್ಣತೆಯ ಸಮದೃಷ್ಟಿಯೀಯೆ

ರಾಗರಂಜಿತಭಾವಮಾಧುರ್ಯಪದಗಳಲಿ
ಯೋಗೀಶ ಕೃಷ್ಣಲೀಲೆಗಳ ಸ್ತುತಿಸಿ
ಆಗುಹೋಗುಗಳನ್ನು ತ್ಯಾಗಲಯದಲಿ ಕೇಳೆ
ಯಾಗಕುಂಡದೊಲು ಕರ್ಣಗಳನಿರಿಸಿ

ಉಷ್ಣಶೀತಲಗಳನು ಸಮತೂಕದಲಿ ಬೆರೆಸಿ
ಕೃಷ್ಣಗಂಧವನರೆದು ಹರಹುತಿರೆ ಘಮವ
ವಿಷ್ಣುವಗಲಕು ನಾಸಿಕಾಗ್ರಗಳ ತೆರೆಯುತಲಿ
ತೃಷ್ಣೆಯೊಂದಿರೆ ಮುಖ್ಯಪ್ರಾಣನಂತಿರುವ

ಗೀತೆಯೊಳತಿಳಿವೆಳೆದು ಅಕ್ಷರಕೆ ಅದ ಬಿಗಿದು
ಮಾತುಗಳ ಕುಣಿಸುತಲಿ ಜಿಹ್ವೆಯದು ಜಿಗಿಯೆ
ಮಾತ ಮೈಯಳಿದರೂ  ಕೃಷ್ಣಪದದರ್ಥವದು
ಗಾಥೆಯಾಗುಳಿದೆಮ್ಮ ಚಿತ್ತದೊಳಗಿಳಿಯೆ

ಚರ್ಮ ತಾ ಸ್ಪರ್ಶಸುಖಸಾಮ್ರಾಜ್ಯವಾಳದೆಯೆ
ಧರ್ಮನಿರಪೇಕ್ಷ ಶ್ರೀಕೃಷ್ಣನಂತುಳಿಯೆ
ಕರ್ಮದಲಿ ಕಾಯ ತಾ ನಂಟು ಬೆಳೆಸದ ಹಾಗೆ
ಕರ್ಮಗೈಯುತ ಚರಮಗತಿಯೊಂದನರಿಯೆ

ಡಿ.ನಂಜುಂಡ

28/07/2017

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ