ಶನಿವಾರ, ಜುಲೈ 18, 2015

ಸಂಭಾಷಣೆ

ನಾನೀಗ ಅಂಗಡಿಗೆ ಹೊರಟಿಹೆನು ನಲ್ಲೆ!
ಏನೇನು ತರಬೇಕು? ಬೇಗ ಹೇಳೆ
ಬೆಲ್ಲ, ಸಕ್ಕರೆ, ಎಣ್ಣೆ ಮತ್ತೆ ಕಡಲೆಯ ಬೇಳೆ 
ಎಲ್ಲವನೂ ತಂದು ಬಿಡು; ಹಬ್ಬ ನಾಳೆ

ಬೇಕುಬೇಡಗಳ ನೀ ಚೀಟಿಯಲಿ ಬರೆದು ಕೊಡೆ
ಮರೆಯದೇ ಪ್ರತಿಯೊಂದೂ ತಂದುಬಿಡುವೆ
ಎಲ್ಲವನೂ ಚೀಟಿಯಲಿ ಬರೆದಿಹೆನು ಎಲೆ ನಲ್ಲ!
ಕೊಂಡು ಬಾ, ಕಾಫಿಯನು ಮಾಡಿಕೊಡುವೆ

ಚೀಟಿ ಒಯ್ಯಲು ಮರೆತು ಬೆಲ್ಲವನು ತರಲಿಲ್ಲ
ಸಿಹಿಗೆ ಸಕ್ಕರೆಯೊಂದೇ ಸಾಕಲ್ಲವೆ?
ಬೆಲ್ಲವನು ತರಲಿಲ್ಲವೇಕೆ ಹೇಳೆಲೆ ನಲ್ಲ!
ಹೋಳಿಗೆಯ ಮಾಡಲದು  ಬೇಕಲ್ಲವೆ?

ಬೆಳಗಾಗಿ ನಾನೆದ್ದು ಸಿದ್ಧ ಹೋಳಿಗೆ ತರುವೆ
ಸಿಡುಕಿ ಚೆಲುವನು ಚೆಲ್ಲುತಿರುವುದೇಕೆ?
ಬೆಲ್ಲ ಬೇಡವೆ ನಲ್ಲ! ಅಲ್ಲನಿಗೆ ಅರ್ಪಿಸಲು
ಬೇಕುಗಳ ತರುವುದಕೆ ಮರೆವು ಏಕೆ?

ಚಂದವೋ ಚಂದವದು ನಲ್ಲನಲ್ಲೆಯ ಬಂಧ
ಬೆಲ್ಲ ಬೇಳೆಯ ಹಾಗೆ ಅವರ ಸಂಬಂಧ
ಬೆಲ್ಲವನು ತಂದಿಲ್ಲವಿಂತೆಂಬ ನೆವದಲ್ಲಿ
ಮಾತಾಡೆ ಚೆಲ್ಲುವುದು ಮಲ್ಲಿಗೆಯ ಗಂಧ

ಡಿ.ನಂಜುಂಡ

18/07/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ