ಶನಿವಾರ, ಜುಲೈ 25, 2015

ಸದಾಶಯ

ಮಳೆ ಸುರಿಯಲಿ ಹೊಳೆ ಹರಿಯಲಿ
ಜಲದೊರತೆಗಳೊಡೆಯಲಿ
ತಳ ತಂಪಿನ ನೆಲಗಂಪಲಿ
ಬೆಳೆಗಳು ನಳನಳಿಸಲಿ 

ಮರಮರಗಳು ನಲಿಯುತಿರಲಿ
ಸ್ವರಸಂಪದದಿಂಪಲಿ
ಥರ ಥರ ಖಗಚರಗಳೆಲ್ಲ
ಗರಿಗೆದರಲಿ ಗುಂಪಲಿ

ಉಸಿರುಸಿರಿಗೆ ಹೊಸ ಹುರುಪಿನ
ಸಸಿಗಳ ಕಸಿಗಟ್ಟಲಿ
ತುಸು ನಾಚಿದ ನಸು ನಗೆಗಳ-
ನೆಸೆಯುತ  ತುಟಿ ತಟ್ಟಲಿ

ಸೃಷ್ಟಿಯೊಲವು ದೃಷ್ಟಿಗಿಳಿದು
ಕಷ್ಟವೆಲ್ಲವಳಿಯಲಿ
ಅಷ್ಟದಳದಲಿಷ್ಟದೇವ-
ನಷ್ಟರೂಪವುಳಿಯಲಿ.

ಡಿ.ನಂಜುಂಡ
25/07/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ