ಬುಧವಾರ, ಜುಲೈ 24, 2013

ಗಣಪತಿಯ ಭೂಲೋಕ ಯಾತ್ರೆ



ಭೂಸಂಚಾರಕೆ ಅನುಮತಿ ಬೇಡಿದ
ಬಾಲಗಣಪತಿಯು ಶಿವನಲ್ಲಿ.
ಭೂಮಿಗೆ ಎಂದೂ ಹೋಗದಿರೆಂದನು
ತನ್ನಯ ಮಗನಿಗೆ ಪರಶಿವನು.

ಹಟವನು ಎಂದೂ ಬಿಡದಿಹ ಗಣಪತಿ
ತಾಯಿಯ ಅನುಮತಿ ಗಿಟ್ಟಿಸಿದ.
ಇಲಿಯನು ಏರುತ ಭಾರತ ಭೂಮಿಯ
ನಗರದ ಬೀದಿಗೆ ಬಂದಿಳಿದ.

ದೇವರ ವಿಗ್ರಹದಂಗಡಿ ನೋಡುತ
ಶಿವನಾ ಬೆಲೆಯದು ಎಷ್ಟೆಂದ.
“ಸಾವಿರ ರೂಗಳು”  ಬೇಕೇ ಎನ್ನುತ
ಅಂಗಡಿ ಮಾಲಿಕ ಹೊರಬಂದ.

‘ತಂದೆಯ ಬೆಲೆಯದು ಕುಸಿದಿರಬಹುದು
ತಾಯಿಯ ಬೆಲೆ ಹೆಚ್ಚಿರಬಹುದು’
ಮನದಲಿ ಯೋಚಿಸಿ ಗಣಪತಿ ಕೇಳಿದ
ಪಾರ್ವತಿ ಬೆಲೆಯದು ಎಷ್ಟೆಂದು.

ಪಾರ್ವತಿ ವಿಗ್ರಹ ಇನ್ನೂ ಕಡಿಮೆ
ಐನೂರು ರೂಗಳ ಕೊಡಿರೆಂದ.
ತಾಯಿಯ ಬೆಲೆಯಾ ಕುಸಿತವ ಕಂಡು
ಬೇಸರವಾಯಿತು ಒಂದುಕ್ಷಣ.

ತನ್ನಯ ವಿಗ್ರಹ ಅಲ್ಲೇ ನೋಡುತ
ಹಿರಿಹಿರಿಹಿಗ್ಗಿದ ಗಣಪತಿಯು.
ಮಣ್ಣಲಿ ಮಾಡಿದ ಸುಂದರಮೂರ್ತಿಯ
ಬೆಲೆಯನು ಕೇಳಿದ ಸಡಗರದಿ.

“ಈಶ್ವರಪಾರ್ವತಿ ಎರಡೂ ಕೊಂಡರೆ
ಗಣಪತಿ ವಿಗ್ರಹ ಪುಕ್ಕಟೆಯು”
ಕುಸಿದನು ಗಣಪತಿ ಬೆಲೆಯನು ತಿಳಿದು
ತಟ್ಟನೆ ಇಲಿಯನು ಏರಿದನು.

ಭೂವ್ಯವಹಾರವು ಬೇಡವೆ ಬೇಡ
ತನಗಿಲ್ಲೇನೂ ಬೆಲೆಯಿಲ್ಲ.
ಭೂಮಿಗೆ ಎಂದೂ ಬಾರೆನು ಎನ್ನುತ
ಕೈಲಾಸಗಿರಿಗೆ ಮರಳಿದನು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ