ಭಾನುವಾರ, ಮಾರ್ಚ್ 24, 2013

ಭಾವದೋಕುಳಿ



ಹೃದಯನವರಂಗದಲಿ ಭಾವದೋಕುಳಿಯಾಡಿ
ತನುಮನವೆಲ್ಲ ಕಾದು ಕೆಂಪಾಯಿತು.
ಬಿಸಿಯಾದ ಎನ್ನೆದೆಗೆ ಭಾವಗೀತೆಯ ಇಂಪು
ಇಳೆಗೆ ಮಳೆ ಸುರಿದಂತೆ ತಂಪೆರೆಯಿತು

ಕವಿಯ ಹೃದಯದ ಭಾವ ವರ್ಣವರ್ಣದಿ ಮಿಂದು
ಕಾಮನಾ ಬಿಲ್ಲಾಗಿ ಮುಗಿಲೇರಿತು.
ಕವಿತೆಗಳ ಚಿಗುರುಗಳು ಕೆಂಪಡರಿ ಚಿಗಿಯುತಲಿ
ಮನ್ಮಥನ ಶರದಂತೆ ಮನಸೋಕಿತು.

ಪರಶಿವನು ಕಣ್ತೆರೆದು ಬೆಂಕಿಯನು ಉಗುಳುತಲಿ
ಮನಸಿಜನ ಸುಟ್ಟಂತೆ ಕನಸಾಯಿತು.
ಅರ್ಥಶಿವ ತಾ ಬಂದು ಪದಗಿರಿಜೆಯನು ವರಿಸಿ
ಸಪ್ತಪದಿ ತುಳಿದಂತೆ. ಮನ ಕಂಡಿತು.

ಕಾಮನಾ ಹುಣ್ಣಿಮೆಗೆ ಭಾವದೋಕುಳಿಯಾಡಿ
ಕವಿಮೊಗವು ಕಾವೇರಿ ರಂಗಾಯಿತು.
ಅರ್ಥಪುರುಷನ ರಸಕೆ ಪದವಧುವು ಮೈದುಂಬಿ
ಶಕ್ತಿಧರಪಲ್ಲವಿಯ ಹಾಡಾಯಿತು.

(ಶಕ್ತಿಧರ=ಕುಮಾರ, ಸುಬ್ರಹ್ಮಣ್ಯ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ