ಶನಿವಾರ, ಮಾರ್ಚ್ 9, 2013

ಮಾತು-ಮಳೆ


ಹೃದಯದಾ ಮಾತುಗಳು ಮೌನದಲಿ ಹದವಾಗಿ
ವಿನಯದಾ ಭಾರದಲಿ ಮೈದುಂಬಲಿ.
ಘನಜಲವ ಹೊತ್ತಿರುವ ಕರಿಮುಗಿಲು ಕೆಳಬಾಗಿ
ಮಳೆಸುರಿದು ಹೊಸಬೆಳೆಗೆ ರಸತುಂಬಲಿ.

ಜನಪದದ ಅರಿವಿನಲಿ  ಸಂಸ್ಕೃತಿಯ ಹರಿವಿನಲಿ
ಮನಬಿರಿದು ಮಾತೆಲ್ಲ ಹೊರಹೊಮ್ಮಲಿ.
ಕಾಲದಾ ತಿಳಿವಿನಲಿ ಹದವಾಗಿ ಮಳೆಸುರಿದು  
ನೆಲವೆಲ್ಲ ಜಲಬಿರಿದು ಮೆದುವಾಗಲಿ.

ವಿನಯದಾ ಮಾತೆಲ್ಲ ಕವಿತೆಗಳ ಸಾಲಾಗಿ
ಜನಮನದ ಬಾಗಿಲಿನ ತಳಿರಾಗಲಿ.
ಮಳೆಯ ಹನಿಹನಿಯು ಬೆಳೆಯ ತೆನೆಯಲಿ ಹಾಲಾಗಿ
ಮನೆಮನೆಯ ತೋರಣದ ಕಣವಾಗಲಿ.

ಮನವೆಲ್ಲ ಬಾನಂತೆ ತನುವೆಲ್ಲ ಮುಗಿಲಂತೆ
ಮಾತೆಲ್ಲ ಮಳೆಯಂತೆ ಅರಿವಾಗಲಿ.
ಅರಿವಿನಲಿ ಬಾನಾಗಿ ಹರಿವಿನಲಿ ಹೊನಲಾಗಿ
ಹೃದಯದಾ ಮಾತೆಲ್ಲ ಮಳೆಯಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ