ಗುರುವಾರ, ಮಾರ್ಚ್ 7, 2013

ಶಿವಧ್ಯಾನ


ನಾನೆಂಬ ಮದಜಲವು ಮೈ ತುಂಬಿ ಭೋರ್ಗರೆದು
ಹೊನಲಾಗಿ ಹರಿಯುತಿರೆ ಎಲ್ಲೆ ಮೀರಿ.
ಮೊಳೆತಬೆಳೆಗಳೆಲ್ಲವು ಕೊಳೆತು ಹೋಗುತಲಿರಲು
ಧ್ಯಾನಶಿವ ತಾ ಬರಲಿ  ಮೌನಮೀರಿ.

ಮದಜಲದ ಗಂಗೆಯನು ಜಟೆಯಲ್ಲಿ ಧರಿಸುತ್ತ
ಮತಿಯಲ್ಲಿ ಪದವಿರಿಸಿ ಸೆಟೆದು ಬರಲಿ.
ಕುಣಿದು ತಾಂಡವವಾಡಿ ಎನ್ನೆದೆಯ ಹದಮಾಡಿ
ಕಣಕಣದಿ ಹಾಲ್ತುಂಬಿ ಶಿವನು ಬರಲಿ.

ಮೂರನೆಯ ಕಣ್ಣನ್ನು  ಜಗದಗಲ ತೆರೆಯುತ್ತ
ಕಾಮಾದಿ ಶತ್ರುಗಳ ಸುಡುತ ಬರಲಿ.
ಮನದ ಅಲೆಯಲೆಯಲ್ಲು ಬೆರೆತಿರುವ ತಮವನ್ನು
ಲಯಮಾಡಿ ಹೊಸತನವ ಹೊಸೆತು ತರಲಿ.

ಧ್ಯಾನರಸ ತುಂಬಿರುವ ಮೌನಘನಚೇತನವು
ಮಾತಾಗಿ ಬರಲೆದೆಗೆ ಮೌನಮೀರಿ.
ಅನುದಿನವು ಮಾತಿನುಪವಾಸನೇಮವನಿತ್ತು
ಇಂಗಿಸಲಿ ಮದಜಲವ ಕೃಪೆಯ ತೋರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ