ಶುಕ್ರವಾರ, ಡಿಸೆಂಬರ್ 21, 2012

ನನ್ನ ಕವನ‌


ಕುಸುಮಿಸದೆ ಪ್ರಸವಿಸಿದ ಕುಂತಿಯ
ಕೂಸು-ನನ್ನ ಕವನ.
ಗಂಗೆಯಲಿ ತೇಲಿಬಿಟ್ಟಿದ್ದೇನೆ... ಕರ್ಣನ ವೀರತ್ವ ಬರಲಿಲ್ಲ.
ವಿಶ್ವಾಮಿತ್ರ ಮೇನಕೆಯ ಸಂಗಮಫಲ
ಪುತ್ರಿ-ನನ್ನ ಕವನ.
ತಪೋವನದಲ್ಲಿ ಕಾಪಿಟ್ಟಿದ್ದೇನೆ.. ಶಕುಂತಲೆಯ ರೂಪವಿಲ್ಲ.
ಹರಿಹರರ ಮೋಹಸಂಜಾತ
ಅಯ್ಯಪ್ಪ- ನನ್ನ ಕವನ.
ಗುಡಿಕಟ್ಟಿದ್ದೇನೆ.. ಭಕ್ತರಿಲ್ಲ.
ಪಾರ್ವತಿಯ ಬೆವರಿನಲಿ ಜನಿಸಿದ
ವಿನಾಯಕ-ನನ್ನ ಕವನ.
ಅರ್ಚಿಸಿ ಕೆರೆಯಲ್ಲಿ ಮುಳುಗಿಸಿದ್ದೇನೆ...ವರವಿಲ್ಲ.
ಪದಪ್ರಕೃತಿಗೆ ಅರ್ಥರಸ ರುಚಿಸಲಿಲ್ಲ.
ರುಚಿಹೀನರಸಧರಿಸಿ ಮಾಸ ತುಂಬದೆ
ಸ್ರವಿಸಿದಾ ಕಸವಿದು ನನ್ನ ಕವನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ