ಶುಕ್ರವಾರ, ಡಿಸೆಂಬರ್ 21, 2012

ಪ್ರಕೃತಿ ಕಡೆದ ಕಾವ್ಯ


ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ
ಅಂದವನು ನೋಡೋಣ ಬನ್ನಿ ನೀವು.
ಕಲ್ಪನೆಯ ಕಲ್ಪಗಳು ಕಳೆದಿರುವ ಕಾವ್ಯಗಳ
ಇತಿಹಾಸ ವೃತ್ತಗಳ ತನ್ನಿ ನೀವು.

ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ
ನಾಲಗೆಗೆ ಸವಿಯಿತ್ತ ಜೇನಿನಲ್ಲಿ.
ಹಣ್ಣುಗಳೊಳಗಿನ ಬೀಜಗಳ ಬಿತ್ತುತ್ತ
ತಿರುಳಗಳ ತಿನ್ನುವಾ ಹಕ್ಕಿಯಲ್ಲಿ.

ಕೀಟಗಳು ಹೆಣೆದಿರುವ ಬಲೆಯ ಮೇಲ್ಗಡೆಯಲ್ಲಿ
ಮುತ್ತಾಗಿ ಹೊಳೆದಿರುವ ಮಂಜಿನಲ್ಲಿ.
ಆಟವಾಡಲು ಬಳ್ಳಿ ಹಿಡಿದಿರುವ ವಾನರರ
ಚುರುಕು ನೋಟದ ಕಣ್ಣ ಹೊಳಪಿನಲ್ಲಿ.

ಸತ್ತಿರುವ ಎಲೆಯೊಳಗಿನಾ ಅಂತಃ ಸತ್ತ್ವವನು
ಚಿಗುರೆಲೆಗೆ ಕಳುಹಿಸಿದ ಮಣ್ಣಿನಲ್ಲಿ.
ಮಣ್ಣಿನಾ ಸತ್ತ್ವವನು ತನ್ನೊಳಗೆ ಕಲೆಸುತ್ತ
ಬೇರೊಳಗೆ ಬೆರೆಸಿರುವ ನೀರಿನಲ್ಲಿ.

ನೀರಡಿಕೆ ನೀಗಿದಾ ಮುಗಿಲುಗಳ ಅಪ್ಪುಗೆಗೆ
ಮೈಚಾಚಿ ನಿಂತಿರುವ ಮರಗಳಲ್ಲಿ.
ಮುಗಿಲುಗಳ ತಾ ಹೊತ್ತು ಮರಗಳ ಬಳಿಯಿತ್ತು
ಒಪ್ಪಿಗೆಯನಿತ್ತಾ ತಂಗಾಳಿಯಲ್ಲಿ.

ಬಿರುಗಾಳಿಗೆದೆಯೊಡ್ಡಿ ಮುರಿದಿರುವ ರೆಂಬೆಗಳ
ಜೀವವನು ತಳೆದಿರುವ ಬೆಂಕಿಯಲ್ಲಿ.
ಭಾವಗಳನುಕ್ಕಿಸುವ ರೂಪಗಳೊಳಹೊಕ್ಕು
ಸಾವನರಿಯದಾ ಜೀವಜೀವಗಳಲಿ.

ಕಲ್ಪನೆಗೆ ಕಸುವಿಟ್ಟ ಕವಿಗಳಾ ನುಡಿಗಳಲಿ
ಹುದುಗಿರುವ ಭಾವಗಳ ನೆನಪಿನಲ್ಲಿ.
ಕಲ್ಪನೆಯ ಕಲ್ಪಗಳೇ ಕಳೆದಿರುವ ಕಾವ್ಯದಲಿ
ಇತಿಹಾಸ ವೃತ್ತಗಳ ಹರಹಿನಲ್ಲಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ