ಶನಿವಾರ, ಡಿಸೆಂಬರ್ 29, 2012

ಕನ್ನಡ ದೇವಿಗೆ ನುಡಿನಮನ


ಕನ್ನಡ ದೇವಿಯೆ ನಿನ್ನಡಿಗೆರಗಿ
ನುಡಿಗಳ ಕಲಿವೆವು ನಾವು
ಅಡಿಗಳ ಹುಡಿಯನು ಶಿರದಲಿ ಧರಿಸಿ
ಜಡತೆಯ ಕಳೆವೆವು ನಾವು

ಪಂಪನು ನುಡಿದಾ ಇಂಪಿನ ಪದಗಳು
ನಮಗೆಂದೆಂದೂ ಹೃದ್ಯ.
ಕವಿವರ ಕುವೆಂಪು ಕಡೆದಾ ಕೃತಿಯು
ಸಂಸ್ಕೃತಿ ಕಲಿಸುವ ಪದ್ಯ.

ಬೇಂದ್ರೆ ಕಾರಂತ ಕಾವ್ಯಾನಂದ
ನಮ್ಮಯ ಹೃದಯದ  ಪ್ರಾಣ.
ಶರಣರ ವಚನದ ಸಮತೆಯ ಸಾರ
ನಮ್ಮಯ ಉಸಿರಿಗೆ ತ್ರಾಣ.

ಸಾವಿರ ಜನುಮವೆ ಕಳೆಯಲಿ ಇಲ್ಲಿ
ಬೇಸರವಿಲ್ಲ ನಮಗೆಂದು.
ನಿನ್ನಯ ಬಸಿರಲೆ ಉಸಿರನು ತಳೆದು
ಕನ್ನಡ ನುಡಿವೆವು ಎಂದೆಂದು.

ನಿನ್ನಯ ಕನಸಿನ ಕುಸುಮದ ಜೇನನು
ಸವಿಯುತ ನಲಿವೆವು ನಾವಿಂದು.
ನಮ್ಮಯ ಕನಸಿನ ಕುಸುಮದ ಜೇನಿಗೆ
ಸಿಹಿ ತುಂಬುವ ಅಮ್ಮನು ನೀನಿಂದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ