ಸೋಮವಾರ, ಏಪ್ರಿಲ್ 15, 2013

ಸಂಪರ್ಕ-ಸಂಬಂಧ!



ಸಂಪರ್ಕಮಾಧ್ಯಮವು ಸೌಕರ್ಯ ಹೆಚ್ಚಿಸಿದೆ
ಹತ್ತಿರದಿ ಕೇಳುತಿದೆ ದೂರಕೂಗು.
ಚರವಾಣಿ ಭಾಷಣದ ಭೀಷಣತೆಗೆಟುಕುವುದೆ
ತುತ್ತ ನೀಡಿದ ತಾಯ ಕರುಳ ಕೂಗು?

ಹೆತ್ತವರ ಠೇವಣಿಗೆ ನಿಮಿಷದಲಿ ಹಣತುಂಬಿ
ಕೃತಾರ್ಥರಾಗುವರು ಮಕ್ಕಳೆಲ್ಲ.
ಸಂಪರ್ಕ ಹೆಚ್ಚುತಿದೆ ಸಂಬಂಧ ಕುಸಿಯುತಿದೆ
ಮನದಲ್ಲಿ ಚಿಂತಿಸುವ ಒಮ್ಮೆ ಎಲ್ಲ.

ದೂರದೂರಿನ ಘಟನೆ ಸೂರುಸೂರಿಗು ಗೊತ್ತು
ದೂರದರ್ಶನವಿರಲು ಮನೆಯಲೆಲ್ಲ.
ಸೂರ ಒಳಗಿನ ಗೋಳು ಬೇಕಿಲ್ಲ ನಮಗೆಂದು
ದೂರದರ್ಶನದ ಗೀಳು ಮಂದಿಗೆಲ್ಲ.

ದಿನದ ಪತ್ರಿಕೆ ತುಂಬ ಚಿತ್ರನಟಿಯರ ಬಿಂಬ
ಬೆಡಗುಬಿನ್ನಾಣಗಳ ಪುಟಗಳೆಲ್ಲ.
ಮಂತ್ರಿಗಳ ಶಾಸಕರ ಲೀಲಾವಿನೋದಗಳ
ವಿಸ್ತಾರವಿಷಯಗಳೆ ಬರೆವರೆಲ್ಲ.

ದೂರದಾ ವಿಷಯಗಳು ಹತ್ತಿರಕೆ ಬರುತಿರಲು
ಹತ್ತಿರದ ಸಂಬಂಧ ದೂರ ದೂರ.
ತಲೆತುಂಬ ವಿಷಯಗಳ ತುರುಕಿಸುವ ಸೌಕರ್ಯ
ತಿಳಿಸುವುದೆ ನಮಗೆಲ್ಲ ಬದುಕಸಾರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ