ಶುಕ್ರವಾರ, ಏಪ್ರಿಲ್ 5, 2013

ವನಪೂಜೆ!



ಪೂಜೆsಗೆ ಬೇಕೆಂದು ಹೂವನ್ನು ಕೊಯ್ಯದಿರು
ಹೂವೆಲ್ಲ ಚೆಲ್ಲಿsವೆ ವನದಲ್ಲಿ.
ಕಾಡುಮಲ್ಲಿಗೆ ಹೂವು ಕೆಂಡಸಂಪಿಗೆ ಹೂವು
ಎಲ್ಲೆಲ್ಲು ಚೆಲ್ಲಿsವೆ ವನದಲ್ಲಿ.

ಕಾಡಿsನ ಹೂವೆಲ್ಲ ಶಂಕರಿಯ ಮುಡಿಯಲ್ಲಿ
ಇರುವಾಗ ಹೂವೇಕೆ ಕೊಯ್ಯಬೇಕು?
ದೇವಿsಯ ಪೂಜೆsಗೆ ದಿನನಿತ್ಯ ಹೂವಿರಲು
ಗುಡಿಯ ದೇವರಿಗೆ ಹೂ ಏಕೆ ಬೇಕು?

ಮನವೆಲ್ಲ ಅರಳಿರಲು ವನದಲ್ಲಿ ಹಸಿರಿರಲು
ಹಸಿರು ಪತ್ರಗಳನೇಕೆ ತರಿಯಬೇಕು?
ಹೆಜ್ಜೇನು ಕಟ್ಟಿರಲು ಸವಿಜೇನು ತುಂಬಿರಲು
ಬೆಳ್ಳಿsಯ ಮಧುಪಾತ್ರೆ  ಏಕೆ ಬೇಕು?

ಮುಗಿಲುಗಳು ವನತುಂಬ ಜಲಧಾರೆ ಸುರಿಸಿರಲು
ನಾವೇಕೆ ಅಭಿಷೇಕ ಮಾಡಬೇಕು?
ಸಿಹಿನೀರ ನದಿಯೊಂದು ವನದಲ್ಲಿ ಹರಿಯುತಿರೆ
ನಮಗೇಕೆ ಮತ್ತೊಂದು ತೀರ್ಥಬೇಕು?

ಆ ರವಿಯೆ ಆಗಸದಿ ಆರತಿಯ ಎತ್ತಿರಲು
ಬತ್ತಿಯಾರತಿಯೇಕೆ ಮಾಡಬೇಕು?
ಹಕ್ಕಿಗಳ ಕಲರವವು ಶ್ರುತಿಬದ್ಧವಾಗಿರಲು
ನಾವೇಕೆ ಶ್ರುತಿಮಂತ್ರ ಹಾಡಬೇಕು?

ತಾನಾಗೆ ಹೂವುಗಳು ನೆಲದಲ್ಲಿ ಸುರಿದಿರಲು
ಮತ್ತೇಕೆ ವರವನ್ನು ಬೇಡಬೇಕು?
ಕಣ್ತುಂಬ ವನ ಕಂಡು ಮನವಿಟ್ಟು ತಲೆಬಾಗಿ
ಅನುದಿನವು ವನಪೂಜೆ ಮಾಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ