ಮಂಗಳವಾರ, ಏಪ್ರಿಲ್ 2, 2013

ಹರಿದ ಸೂತ್ರ!



ಅಧಿಕಾರ ಭ್ರಷ್ಟತೆಗೆ ಅಂಕುಶವು ಏಕಿಲ್ಲ?
ಆತಂಕ ಕಾಡುತಿರೆ ರಾಜ್ಯದಲ್ಲಿ.
ಅವನಿಕಾಯುವ ದೇವ ಸುಮ್ಮನಾಗಿಹನೇಕೆ?
ಪಾಪಪುಣ್ಯದ ಲೆಕ್ಕ ಪತ್ರವೆಲ್ಲಿ?

ಗಣರಾಜ್ಯವಿದೆಯಲ್ಲಿ ಜನಸೂತ್ರ ಸಾಕೆಂದು
ತಾ ಸೂತ್ರ ಹರಿಬಿಟ್ಟು ನೋಡುತಿಹನೆ?
ಭ್ರಷ್ಟತೆಯ ಪಟವಿಲ್ಲಿ ಹಾರುತಿರೆ ಗಗನದಲಿ
ಆ ದೇವ ಗಾಳಿಪಟ ಆಡುತಿಹನೆ?

ಪಟ್ಟವೇರಿದ ರಾಜ ಅಟ್ಟಹಾಸದಿ ಮೆರೆಯೆ
ಹೋಯಿತೆಲ್ಲಿಗೆ ನಮ್ಮ ರಾಜ್ಯಸೂತ್ರ?
ಕಲಿಗಾಲವಿದೆಯಲ್ಲಿ ಕಲಿನಿಯಮ ಸಾಕೆಂದು
ಹರಿದುಬಿಟ್ಟಿದೆಯೇನು ಜಗದಸೂತ್ರ?

ಚಟ್ಟವೇರಿದ ರಾಜ ಹೊತ್ತೊಯ್ಯುವನೆ ಗಂಟ?
ಮತ್ತೇಕೆ ಭ್ರಷ್ಟತನ ಬಿಡಬಾರದೆ?
ಸುಡುಗಾಡ ಕಟ್ಟಿಗೆಯು ಸುಟ್ಟೀತೆ ಕೃತಕರ್ಮ!?
ಪ್ರಾರಬ್ಧ ಫಲವಾಗಿ ಸುಡಲಾರದೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ